ಮಂಗಳವಾರ, ಅಕ್ಟೋಬರ್ 6, 2009

ಭಯ


ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ

ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು

ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು

ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ

ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ

ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ

"ನನ್ನ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಒಂದು ವರ್ಷದ ಅವಧಿಯಲ್ಲಿ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ."

ಮಂಗಳವಾರ, ಜೂನ್ 2, 2009

ನೀನಿಲ್ಲ ಅನ್ನೋ ಕೊರತೆ ನನ್ನನ್ನು ತುಂಬಾನೆ ಕಾಡುತ್ತೆ...

ಅಂತರಾಳ - ೭

ನಿಂಗೊತ್ತಾ ???!!!

ನಾನು ತೀರ ಚಿಕ್ಕವನಿದ್ದಾಗ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಅಮ್ಮ ಶನಿವಾರದ ಬೆಳಗಿನ ಶಾಲೆಗೆ ತಡವಾಗುತ್ತೆ ಅಂತ ಓಡೋಡಿ ಹೋದ ಮೇಲೆ ನಾನು ಸ್ನಾನದ ಮನೆಯಲ್ಲಿ ಬಿಸಿ ನೀರು ಬೆರೆಸಿಕೊಳ್ಳಲು ಬರದೆ ಬರಿ ತಣ್ಣೀರು ಸುರಿದು ಕೊಂಡು ಸ್ನಾನ ಮುಗಿಸಿದಾಗೆಲ್ಲ ನೀನು ವಿಪರೀತ ಬೇಕು ಅಂತ ಅನ್ನಿಸಿಬಿಡುತ್ತಿದ್ದೆ. ನೀನಿಲ್ಲ ಅನ್ನೋ ಕೊರಗು ಮತ್ತು ಕೊರತೆ ನನ್ನನ್ನು ಕಾಡುತ್ತಿದ್ದಿದ್ದೆ ಅಂತಹ ಕ್ಷಣಗಳಲ್ಲಿ.

ಅಮ್ಮ ಜ್ವರದಿಂದ ಹಾಸಿಗೆ ಹಿಡಿದ ದಿನಗಳಲ್ಲಿ ಅಕ್ಕಿ ಅಥವಾ ಗೋಧಿ ರವೆಯನ್ನೋ ಹುರಿದು, ಕುದಿವ ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ ಗಂಜಿ ಮಾಡಿ ಇಳಿಸುವ ಹೊತ್ತಲ್ಲಿ ಪಾತ್ರೆಯಂಚು ಕೈ ತಾಕಿ ಸುಟ್ಟಾಗ ನೀನಿದ್ದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಲ್ವ ಅಂತ ಕಣ್ಣೀರು ತುಂಬಿ ಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಪಾಚಿಯ ಮೇಲೆ ಕಾಲಿಟ್ಟು ಕೆಸರಲ್ಲಿ ಜಾರಿ ಬಿದ್ದು ಮನೆಗೆ ಬಂದಾಗ, ಪರೀಕ್ಷೆ ಹಿಂದಿನ ದಿನ ನಿದ್ದೆ ಬಾರದಿದ್ದಾಗ, ನಡು ಮಧ್ಯ ರಾತ್ರಿ ಬೀದಿ ನಾಯಿ ವಿಕಾರವಾಗಿ ಊಳಿಟ್ಟಾಗ, ಏನೋ ತಪ್ಪು ಮಾಡಿದಾಗ ಅಮ್ಮ ಗದರಿದಾಗ ನೀನಿಲ್ಲ ಅನ್ನೋದು ತುಂಬಾ ನೋವು ನೀಡುತ್ತಿತ್ತು.

ಎರಡನೇ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಬಿಡದೆ ಧೋ ಎಂದು ಸುರಿದ ಮಳೆಯಿಂದ ಮನೆಗೆ ಬರಲಾಗದೆ ಶಾಲೆಯ ಮೆಟ್ಟಿಲ ಮೇಲೆ ಗೆಳೆಯನ ಜೊತೆ ಕುಳಿತಿದ್ದಾಗ ಛತ್ರಿ ಹಿಡಿದು ಬಂದ ಅವನಕ್ಕ ಅವನ ತಲೆ ಒರೆಸಿ ಛತ್ರಿ ಒಳಗೆ ಸೇರಿಸಿ ಕೊಂಡಾಗ, " ಮಳೆ ನನಗೇನು ಅಲ್ಲ, ಮಳೆಯಂದ್ರೆ ಮತ್ತು ಮಳೆಯಲ್ಲಿ ನೆನೆಯೋದಂದ್ರೆ ನನಗೆ ತುಂಬಾನೆ ಇಷ್ಟ" ಅಂತ ಸುಳ್ಳೇ ನಕ್ಕು ಸಮವಸ್ತ್ರದ ಅಂಗಿಯೊಳಗೆ ಶಾಲೆ ಚೀಲ ಸೇರಿಸಿ ಕಣ್ಣೀರಾಗಿ ಮಳೆಯಲ್ಲಿ ಓಡಿದ ದಿನ. ಮನೆ ತಲುಪಿದ ಮೇಲೆ "ಮಳೆಯಲ್ಲಿ ನೆಂದು ಬಂದಿದೀಯಲ್ಲ, ಸ್ವಲ್ಪ ಹೊತ್ತು ಕಾದಿದ್ದು ಬರಬಹುದಿತ್ತಲ್ಲ" ಎಂದು ಅಮ್ಮ ರೇಗಿದಾಗ, ನನ್ನ ಪಾಲಿಗೆ ನೀನು ಯಾಕಿಲ್ಲ ಅಂತ ದೇವರಲ್ಲಿ ಜಗಳಕ್ಕೆ ನಿಲ್ಲ ಬೇಕು ಅಂತ ಅನ್ನಿಸಿ ಬಿಡುತ್ತಿತ್ತು. ನೀನಿದ್ದಿದ್ದರೆ ನಾನು ಮಳೆಯಲ್ಲಿ ನೆನೆಯುತ್ತಿರಲಿಲ್ಲ ಅಂತೇನು ಇಲ್ಲ, ಆದರೆ ನೆನೆದು ಮುದ್ದೆಯಾಗಿ ಬಂದಾಗ ಕನಿಷ್ಠ ತಲೆ ಒರೆಸಿ ಕೊಡಲಿಕ್ಕಾದರು ನೀನು ಇರುತ್ತಿದ್ದಿದ್ದರೆ ಅನ್ನೋ ತುಡಿತ ನನಗಿತ್ತು.

ಮೊನ್ನೆ ಹೀಗೆ ಈ ಯಾಂತ್ರಿಕ ನಗರಿಯ ಮಳೆಗೆ ಸಿಕ್ಕಿ ಒದ್ದೆಯಾಗಿ ಮನೆ ಸೇರಿದಾಗ ಫೋನಾಯಿಸಿದ ಅಮ್ಮ ಮದುವೆ ಬಗ್ಗೆ ಏನು ತೀರ್ಮಾನಿಸಿದೆ ಎಂದಾಗ, ಕೊನೆ ಪಕ್ಷ ನನ್ನ ತಮ್ಮ ಚಿಕ್ಕವನು, ಇಷ್ಟು ಬೇಗ ಮದುವೆ ಬೇಡ ಅಂತ ಅಮ್ಮನಿಗೆ ಒಪ್ಪಿಸಲಿಕ್ಕಾದರು ಅಥವಾ ಅಮ್ಮ ನೋಡುವ ಹುಡುಗಿ ನನ್ನ ತಮ್ಮನಿಗೆ ಸೂಕ್ತಳೋ ಇಲ್ಲವೊ ಅಂತ ನಿರ್ಧರಿಸಲು ನೀನಿರಬೇಕಿತ್ತು.

ಕೊನೆ ಪಕ್ಷ ಎದೆಯ ದುಗುಡ ತೀರ ಹೆಚ್ಚಾದಾಗ ಮುಖ ಮುಚ್ಚಿಕೊಂಡು ಮಲಗಿ ಬಿಡಲು ನಿನ್ನ ಮಡಿಲು ಬೇಕಿತ್ತು, ಅಲ್ಲಿ ತಲೆ ನೇವರಿಸಿ ಸಮಾಧಾನಿಸಲು ನನಗೂ ಒಬ್ಬಳು ಅಕ್ಕ ಇರಬೇಕಿತ್ತು.

ಶುಕ್ರವಾರ, ಏಪ್ರಿಲ್ 17, 2009

ಅಸ್ತಿತ್ವವೇ ಇಲ್ಲದ ಮೀನಿನ ಕಣ್ಣೀರಾಗಿತ್ತು ನನ್ನಳಲು ಅಂದು

ಪಿಸು ಮಾತು - ೫

(ಹುಡುಗಿಯ ಮನಸ್ಸಿನ ತುಮುಲಗಳು ಹೇಗಿರಬಹುದು ಪ್ರೀತಿಯಿಂದ ಹೊರ ನಡೆದಾಗ ಅನ್ನೋದು ಒಂದು ಯಕ್ಷ ಪ್ರಶ್ನೆಯೇ ಸರಿ, ಹೀಗಿರಬಹುದೇನೋ ಎಂದು ಊಹಿಸಿಕೊಂಡು ಈ ಪತ್ರ ಬರೆದಿದ್ದೇನೆ. ಅಂದ ಹಾಗೆ ಇದು ನನ್ನ ಹಿಂದಿನ ಬರಹಗಳಿಗೆ ಮತ್ತು ಧರಿತ್ರಿಯಲ್ಲಿ ಪ್ರಕಟವಾಗಿರುವ ಪ್ರೇಮ ಪತ್ರಕ್ಕೆ ಉತ್ತರ ನೀಡುವ ಬಾಲಿಶ ಪ್ರಯತ್ನ. ಎಂದಿನಂತೆ ತಪ್ಪಿದ್ದರೆ ಕ್ಷಮಿಸಿ ತಿದ್ದುತ್ತೀರಿ ಎಂಬ ನಂಬಿಕೆಯಿದೆ.)

ಪ್ರೇಮ ಲೋಕದ ಹಿಮ ಬಿಂದು,

ಹೀಗೆ ಕರೆಯುವ ಮುನ್ನ "ನನ್ನ ಪ್ರೀತಿಯ" ಅಂತ ಸೇರಿಸಲು ಯಾಕೋ ಇವತ್ತು ಮನಸ್ಸು ಕೇಳುತ್ತಿಲ್ಲ ಗೆಳೆಯ, ನಾನು ಆ ಯೋಗ್ಯತೆ ಕಳೆದುಕೊಂಡಿದ್ದೇನೆ ಎಂದು ನೀನು ಹೇಳುತ್ತೀಯೇನೋ, ನನ್ನ ಬಳಿ ಅದಕ್ಕೆ ಉತ್ತರವಿಲ್ಲ. ನೀನೂ ನನಗಿನ್ನು ಬೇಡ ಎಂದು ತೀರ್ಮಾನಿಸಿ ನಿನ್ನೆದುರು ಹಾಗೆ ನಿಂತು ಕಣ್ಣಿಗೆ ಕಣ್ಣು ಬೆರೆಸಲಾಗದೆ ಒತ್ತರಿಸಿ ಬರುತ್ತಿದ್ದ ದುಃಖ ತಡೆದು ಕ್ಷಮಿಸಿ ಬಿಡು ಇಲ್ಲಿಂದ ಮುಂದೆ ನಾವು ಒಂದೇ ದಾರಿಯಲ್ಲಿ ಸಾಗಲಾರೆವು ಎಂದು ನಾನೇ ಅಂದ ಕ್ಷಣ ನನಗೆ ಈ ಭೂಮಿ ಇಲ್ಲೇ ಬಾಯಿ ಬಿಟ್ಟು ಬಿಡಬಾರದೆ ಎಂದೆನಿಸಿದ್ದು ಸುಳ್ಳಲ್ಲ. ಪ್ರೀತಿಸಲು ನೂರು ಕಾರಣಗಳು ಬೇಕು, ಪ್ರೀತಿ ನಿರಾಕರಿಸಲು ಕಾರಣವೇ ಬೇಕಾಗುವುದಿಲ್ಲ ಎಂಬ ನಿನ್ನ ಮಾತನ್ನು ನಾನು ಎಂದಿಗೂ ಒಪ್ಪಲಾರೆ ಗೆಳೆಯ. ಇಂದು ಈ ಪ್ರೀತಿ ಮುಂದುವರೆಸಲು ಸಾಧ್ಯವಿಲ್ಲ ಎಂದೆನಲು ನನ್ನಲ್ಲಿ ಸಾವಿರ ಕಾರಣಗಳಿವೆ ಹುಡುಗ.

ನಿನ್ನಲ್ಲಿಂದ ಬಂದು ಅಮ್ಮನಿಗೆ ಮುಖವನ್ನು ತೋರಿಸದೇ ನೇರ ಸ್ನಾನ ಗೃಹಕ್ಕೆ ಹೋದವಳು, ಅನಾಮತ್ತು ೫ ಬಿಂದಿಗೆ ತಣ್ಣೀರು ಸುರಿದು ಕೊಂಡಿದ್ದೆ, ಆ ತಣ್ಣೀರಿನ ನಡುವೆ ನನ್ನ ಕಣ್ಣೀರು ಕಾಣದೆ ಹೋಗಿ ಬಿಡಲೆಂದು. ನನ್ನಿಂದ ಆಗಲಿಲ್ಲ ಗೆಳೆಯ, ಅಮ್ಮನಿಗೆ ಮುಖ ಕೊಟ್ಟು ಮಾತನಾಡಲಾಗಲಿಲ್ಲ, ಅಪ್ಪನ ಮಾತಿಗೆ ಉತ್ತರಿಸಲಾಗಲಿಲ್ಲ. ನಿನ್ನನ್ನು ಪ್ರೀತಿಸಿದ ಮೇಲೆ ನನ್ನ ಮನೆಯಲ್ಲಿ ನಾನು ಪರಕೀಯಳೇನೋ ಎಂದೆನಿಸಲಾರಂಭಿಸಿ ಬಿಟ್ಟಿತು ಕಣೋ.

"ನನ್ನ ಮುದ್ದು ಮಗಳೇ ನಿನಗೆ ಒಬ್ಬ ಒಳ್ಳೆ ಹುಡುಗನನ್ನು ನೋಡಿ ಅಂಗಳಕ್ಕೆಲ್ಲ ಚಪ್ಪರ ಹಾಕಿ, ಚೆಂದದ ಅಲಂಕಾರದಲ್ಲಿ, ಗುರು ಹಿರಿಯರ ಎದುರಲ್ಲಿ, ಮತ್ತು ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟು, ಊರಿನವರೆಲ್ಲ ಎಷ್ಟು ಚೆನ್ನಾಗಿತ್ತು ಮದುವೆ, ಹಸೆ ಮಣೆಯ ಮೇಲೆ ನಿನ್ನ ಮಗಳು ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಳು, ಅದೆಷ್ಟು ಮುದ್ದಾಗಿದ್ದಾಳೋ ನಿನ್ನ ಮಗಳು ಎಂದೆನ್ನ ಬೇಕು" ಎಂದು ಅಪ್ಪ ನನ್ನ ತಲೆ ನೇವರಿಸಿ ನುಡಿದಾಗ ನೀನು ಅದೆಷ್ಟು ನೆನಪಾಗಿದ್ದೆ ಗೊತ್ತಾ ಗೆಳೆಯ, ನಾನು ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಅಪ್ಪನ ಮಡಿಲಲ್ಲಿ ಮುಖ ಹುದುಗಿಸಿ ಮಲಗಿದರೆ, ಆಗ ಕಣ್ಣೀರು ತುಂಬಿ ಅಪ್ಪ ಏನೆಂದರು ಗೊತ್ತ "ಅಪ್ಪ-ಅಮ್ಮನ್ನ ಬಿಟ್ಟು ಹೋಗ ಬೇಕು ಅಂತ ಅಳ್ತೀಯಲ್ಲೋ ಕಂದ, ನನಗೆ ಗೊತ್ತು ನಿನಗೆ ಎಷ್ಟು ಕಷ್ಟ ಆಗುತ್ತೆ ಅಂತ, ಎಲ್ಲರೆದುರು ನಿನ್ನ ಮದುವೆ ತುಂಬಾ ಚೆನ್ನಾಗಿ ಮಾಡಿ ಕೊಡಬೇಕು ಅನ್ನೋದೇ ನನ್ನ ಆಸೆ, ನಿನ್ನ ನೋಡಿ ಎಲ್ಲಾರು ಎಂತಹ ಸಂಸ್ಕಾರದಿಂದ ಮಗಳನ್ನು ಬೆಳೆಸಿದ್ದಾನೆ ಅಂತ ಖುಷಿ ಪಡಬೇಕು, ಮತ್ತು ನಾನು ಅವರ ಮಾತು ಕೇಳಿ ಹೆಮ್ಮೆ ಪಡಬೇಕು." ಎಂದು ಹೇಳಿ, ಅಮ್ಮನ ಕುರಿತು "ನೋಡೇ ನಮ್ಮ ಮಗಳು ಮದುವೆ ಆಗಿ ಅಪ್ಪ-ಅಮ್ಮನ್ನ ಬಿಟ್ಟು ಹೋಗೋದಿಲ್ಲ ಅಂತ ಅಳ್ತಾ ಇದ್ದಾಳೆ." ಎಂದಾಗ ಅದಕ್ಕೆ ದನಿಗೂಡಿಸಿದ ಅಮ್ಮ "ಪುಟ್ಟ, ನಿಮ್ಮಪ್ಪನ ಒಂದೇ ಒಂದು ಆಸೆ ಕಣೋ ಬಂಗಾರಿ ಇದು, ನೀನು ಮದುವೆ ಆಗಲೇ ಬೇಕು ಕಂದ, ಹಠಮಾಡ ಬಾರದು ಚಿನ್ನಾ" ಅಂತ ನನ್ನ ಅಪ್ಪಿ ಹಿಡಿದಿದ್ದಳು. ಯಾಕೋ ನೀನು ನನ್ನ ತಬ್ಬಿ ಹಿಡಿದಿದ್ದು ಕೂಡ ಇಷ್ಟು ಹಿತವಾಗಿರಲಿಲ್ಲವೇನೋ ಅಂತ ಮೊದಲ ಬಾರಿಗೆ ಅನ್ನಿಸಿ ಬಿಟ್ಟಿತು ಕಣೋ ಗೆಳೆಯ.

ರಾತ್ರಿಯೊಬ್ಬಳೆ ಕೋಣೆ ಸೇರಿ ಸದ್ದೇ ಮಾಡದೆ ಅದೆಷ್ಟು ಅತ್ತು ಬಿಟ್ಟಿದ್ದೆ ಗೊತ್ತ ಗೆಳೆಯ, ನೀನು ತುಂಬಾ ನೆನಪಾಗಿದ್ದೆ ಅವತ್ತು. ನಾನು ಪ್ರೀತಿಸಿ ತಪ್ಪು ಮಾಡಿದೆನೇನು ಎಂಬ ಪ್ರಶ್ನೆ ಜೀವ ಹೋಗುವಷ್ಟು ಕಾಡಿದ್ದೆ ಆ ರಾತ್ರಿ. ನೀನು ಯಾವಾಗಲು ಹೇಳ್ತೀಯಲ್ಲ "ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವೆ ಮಾಡಿ ಕೊಡ ಬೇಕು ಅಂತ ನಿರೀಕ್ಷಿಸೋದು ತಪ್ಪು, ಒಪ್ಪಿದರೆ ಸಂತೋಷ, ಒಪ್ಪದಿದ್ದರೆ ನಾವು ಮದುವೆ ಆಗಿ ಇವರಿಬ್ಬರನ್ನು ಬೇರೆ ಮಾಡಿದ್ದಿದ್ದರೆ ಎಂತಹ ತಪ್ಪಾಗುತ್ತಿತ್ತು ಅಂತ ಅವರಿಗೇ ಅನ್ನಿಸಿ ಬಿಡುವಷ್ಟು ಚೆಂದಗೆ ಬದುಕಿ ಬಿಡೋಣ", ನಿನ್ನ ಜೀವನ ಪ್ರೀತಿಗೆ ನೀನೆ ಸಾಟಿ ಗೆಳೆಯ, ಆದರೆ ನನ್ನಿಂದ ಇಂದು ಸಾಧ್ಯವಾಗುತ್ತಿಲ್ಲ ಕಣೋ. ಯಾಕೋ ನನಗೆ ಇವತ್ತು ಈ ಮಾತು ಇಷ್ಟ ಆಗುತ್ತಿಲ್ಲ ಕ್ಷಮಿಸಿ ಬಿಡು ಗೆಳೆಯ. ನನ್ನ ಮದುವೆಗೆ ಚಪ್ಪರ ಇರಲೇ ಬೇಕು, ನನಗೋಸ್ಕರ ಅಲ್ಲದಿದ್ದರೂ ಅಪ್ಪ-ಅಮ್ಮನಿಗೊಸ್ಕರ ಮತ್ತು ಅವರ ಗೌರವಕ್ಕೋಸ್ಕರ. ನನ್ನಪ್ಪ ಅಂದರೆ ಊರಿನವರಿಗೆಲ್ಲ ತುಂಬು ಗೌರವ, ಅದನ್ನು ನಮ್ಮ ಸ್ವಾರ್ಥಕ್ಕಾಗಿ ಕಳೆದು ಬಿಡಲೇನೋ ಗೆಳೆಯ.

ಅಪ್ಪ-ಅಮ್ಮ ನಮ್ಮ ಪ್ರೀತಿಗೆ ಒಪ್ಪಲಾರರು ಗೆಳೆಯ ನಮ್ಮಿಬ್ಬರದು ಬೇರೆ ಬೇರೆ ಜಾತಿ, ಮತ್ತು ಜಾತಿ ಬಿಟ್ಟವಳು ಎಂದೆನಿಸಿ ಕೊಂಡು ನಿನ್ನ ಜೊತೆ ಬಂದು ಬಿಡಲು ನಾನು ಸಿದ್ಧಳಾದರು. ನಾಳೆ ನಮ್ಮ ಮಗುವಿನದು ಯಾವ ಜಾತಿ ಗೆಳೆಯ. ನೀನು ಯಾವಾಗಲು ಹೇಳುತ್ತಿದ್ದೆಯಲ್ಲ ಜಗತ್ತಿನಲ್ಲಿರುವುದು ಕೇವಲ ಎರಡೇ ಜಾತಿ ಒಂದು ಗಂಡು-ಇನ್ನೊಂದು ಹೆಣ್ಣು ಅಂತ, ಆದರೆ ಇದನ್ನು ಯಾವ ಅರ್ಜಿಯ ಜಾತಿಯ ಕಾಲಂ ನಲ್ಲಿ ಬರೆದರೆ ನಮ್ಮ ಸರ್ಕಾರ ಮಾನ್ಯತೆ ನೀಡುತ್ತದೆ ಹೇಳು ಹುಡುಗ, ನಮ್ಮದು ಹೆಸರಿಗಷ್ಟೇ ಕಣೋ ಜಾತ್ಯಾತೀತ ರಾಷ್ಟ್ರ. ನಾನು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದ ಕ್ಷಣ ಅಪ್ಪ-ಅಮ್ಮನನ್ನು ಕಳೆದು ಕೊಂಡು ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತಿತ್ತು ಕಣೋ ಹುಡುಗ.

ನಿನ್ನನ್ನು ನೆನಪಿಸಿಕೊಂಡು ನಾನು ರಾತ್ರಿಯಿಡೀ ಅತ್ತಿದ್ದೇನೆ ಗೆಳೆಯ, ಆದರೆ ಹುಡುಗಿ ನೋಡು ನಿನ್ನಂತೆ ಎಲ್ಲವನ್ನು ಎದುರಿಸಿ ನಿಂತು ಘರ್ಜಿಸುವ ಶಕ್ತಿಯಿಲ್ಲದೆ ಹೋಯಿತು. ಅಮ್ಮ ತಾನು ಗಂಜಿ ಕುಡಿದು ನನಗೆ ಅನ್ನ ಮಾಡಿ ಹಾಕಿದ್ದಾಳೆ, ಅಪ್ಪ ಅದೇ ತನ್ನ ಹಳೆಯ ಅಂಗಿಗೆ ತೇಪೆ ಹಾಕಿಸಿ ಕೊಂಡು ನನಗೆ ಹೊಸ ಬಟ್ಟೆ ಹಬ್ಬಕ್ಕೆ ಅಂತ ತಂದು ಕೊಟ್ಟಿದ್ದಾರೆ.

ರಾತ್ರಿ ಹೊತ್ತು ಆಕಾಶದ ಚಂದಿರನನ್ನು ನೋಡು, ನಾನು ನೋಡುತ್ತೇನೆ, ಅವನಲ್ಲೂ ಕಲೆಗಳಿವೆಯಂತೆ ಪ್ರೀತಿಯಲ್ಲಿ ನನ್ನ ತಪ್ಪುಗಳಿದ್ದಂತೆ, ಅವನಲ್ಲಿ ನಿನ್ನನ್ನು ಕಾಣಲು ಯತ್ನಿಸುತ್ತೇನೆ. ಆದರೆ ಕಣ್ಣೀರ ಬೆಲೆ ಅರ್ಥವಾಗದವಳು ಎಂದೆನ್ನ ಬೇಡ ಗೆಳೆಯ, ನಿನ್ನ ಕಣ್ಣ ಬಿಂದುಗಳನ್ನು ತಡೆಯ ಬೇಕೆಂದು ಮನಸ್ಸು ನುಡಿದರು, ಆಂತರ್ಯ ಅಳುಕಿತ್ತು, ದೂರ ಹೋಗ ಹೊರಟವಳು ಮತ್ತೆ ನಿಂತು ನಕ್ಕು ಹೊರಡುವುದು ತರವಲ್ಲ ಅಲ್ವೇನೋ ಹುಡುಗ, ಮತ್ತೆ ನನಗೆ ನಿನ್ನ ಪಾಲಿನ ದೌರ್ಬಲ್ಯ ಎಂದೆನಿಸಿ ಕೊಳ್ಳುವುದು ಬೇಕಾಗಿರಲಿಲ್ಲ. ಮತ್ತೆ ನಾಳೆಯಿಂದ ನಾನಿರದ ಬದುಕಿನಲಿ ನಿನ್ನ ಕಣ್ಣೀರ ಬಿಂದುವನ್ನು ನೀನೆ ಒರೆಸಿ ಕೊಳ್ಳಬೇಕು ಕಣೋ.

"ವರ್ಷಗಟ್ಟಲೆ ಜತನದಿಂದ ಓದಿ ಕೊನೆಗೆ ಪರೀಕ್ಷೆಯನ್ನು ಬರೆಯಗೊಡದೆ ನೀನು ಅನುತ್ತೀರ್ಣ ಎಂದು ಘೋಷಿಸುತ್ತೀಯೇನೆ ಹುಡುಗಿ" ಅಂತ ನನ್ನನ್ನು ಪ್ರಶ್ನಿಸುತ್ತೀಯ ಗೆಳೆಯ, ಕ್ಷಮಿಸಿ ಬಿಡೋ ಪರೀಕ್ಷಿಸುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೇನೆ. ನಿನ್ನನ್ನು ಬಿಟ್ಟು ಹೊರಟು ಹೋಗುವುದು ನಾನು ಮಾಡುವ ಮೋಸ, ಅತ್ಯಾಚಾರ, ದ್ರೋಹ ಅಂತಾದರೆ, ಹೆತ್ತವರ ಆಸೆಗೆ ಮಣ್ಣೆರಚಿ ನಿನ್ನ ಜೊತೆಗೆ ಬಂದಾಗ ಅಪ್ಪ-ಅಮ್ಮನಿಗೆ ನನ್ನಿಂದ ಆಗುವ ನೋವಿಗೆ ಹತ್ಯೆ ಎಂದೆನ್ನ ಬಹುದಲ್ಲವೇ ಗೆಳೆಯ, ಕೊಂದು ಬಿಡಲೇ ನನ್ನ ಹೆತ್ತವರನ್ನು, ಉತ್ತರಿಸು ಹುಡುಗ.

ನೀನೆ ಹೇಳಿದಂತೆ ನಾನು ನಿನ್ನ ಬದುಕಿನ ಫುಟ್ ಪಾತ್ ಆಗಿಬಿಡುತ್ತೇನೆ, ನೀನು ನಿನ್ನದೇ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟು ಬಿಡು. ನಿಸರ್ಗವನ್ನು ಪ್ರೀತಿಸ ಹೊರಟಿದ್ದೀಯ, ಆದರೆ ಒಂದಂತು ಸತ್ಯ ಧಾರೆಯೆರೆದಷ್ಟು ದಿನ ನನ್ನ ನಿಷ್ಕಳಂಕ ಪ್ರೀತಿಯನ್ನು ಧಾರೆಯರೆದ ತೃಪ್ತಿಯಿದೆ ನನಗೆ. ಇಲ್ಲಿ ನನ್ನ ಕಣ್ಣ ಬಿಂದುವಿಗೆ ಹೊಣೆಯಾರು ಇಲ್ಲ, ಆದರೆ ನಿನ್ನ ಕಣ್ಣಲ್ಲಿ ಹನಿ ಬಿಂದುವಿಗೆ ಜಾಗ ಮಾಡಿ ಕೊಟ್ಟಿದ್ದಕ್ಕೆ ದಯವಿಟ್ಟು ಕ್ಷಮಿಸಿ ಬಿಡೋ ಗೆಳೆಯ. ಇನ್ನೇನು ಬರೆಯಲಾಗುತ್ತಿಲ್ಲ ನನ್ನಿಂದ, ಕಣ್ಣೀರ ಕಟ್ಟೆ ಒಡೆದಿದೆ ಇಲ್ಲಿ, ಜೊತೆಗೆ ಕೈ ಕೂಡ ನಡುಗುತ್ತಿದೆ ಕಣೋ.

ಇಂತಿ,
-ಅವಳೇ (?)

ಬುಧವಾರ, ಏಪ್ರಿಲ್ 15, 2009

ಸೋಲಿನ ಅಮಲು ಎಂಬ ಬದುಕಿನ ಅಪಭ್ರಂಶು

ಇಡೀ ಕೋಣೆಯ ತುಂಬಾ ಅಸ್ತವ್ಯಸ್ತವಾಗಿ ಏನೇನೋ ಹರಡಿ ಹೋಗಿದೆಯೇನೋ ಎಂಬಂತಿದೆ, ಅಲ್ಲಿಯ ಪ್ರತಿ ವಸ್ತುವು ಒಪ್ಪವಾಗಿ-ಅಚ್ಚುಕಟ್ಟಾಗಿ ತಮ್ಮ ಜಾಗದಲ್ಲಿ ಕುಳಿತಿವೆಯಾದರು ಅಲ್ಲಿ ಎಲ್ಲವು ಅವ್ಯವಸ್ಥಿತ ಅನ್ನುವ ಅಮೂರ್ತ ಭಾವ, ಅವನು ಏನನ್ನೋ ಕಳೆದು ಕೊಂಡಿರುವವನಂತೆ ಹುಡುಕಾಡುತ್ತಿದ್ದಾನೆ, ಅಲ್ಲಿರುವ ಎಲ್ಲವನ್ನು ತಡಕಾಡುತ್ತಿದ್ದಾನೆ, ಅಸಲಿಗೆ ಅವನು ಹುಡುಕುತ್ತಿರುವುದೇನು ಅಥವಾ ಹುಡುಕಲು ಅವನು ಕಳೆದುಕೊಂಡಿರುವುದೇನು ಎಂಬುದರ ಅರಿವೇ ಅವನಿಗಿಲ್ಲ. ಅಲ್ಲಿ ಕತ್ತಲಿಲ್ಲ ಆದರೂ ಅವನಿಗೆ ಪ್ರತಿ ವಸ್ತುವು ಅಗೋಚರ.

ಸುಮ್ಮನೆ ಹೆಜ್ಜೆ ಇಟ್ಟು ಹೊರಟವನ ಕಾಲಿಗೆ ಅದೇನೋ ಎಡ ತಾಕಿ ಮುಗ್ಗರಿಸುತ್ತಾನೆ, ಮತ್ತೆ ಸಾವರಿಸಿ ಕೊಂಡು ಎದ್ದು ನಿಂತು ಕಾಲಿಗೆ ಸಿಕ್ಕ ವಸ್ತುವನ್ನು ಕೈಯಲ್ಲಿ ಹಿಡಿಯ ಹೋಗುತ್ತಾನೆ, ಅದು ಸಿಗಲೊಲ್ಲದು. ಮತ್ತೆ ದಿಟ್ಟಿಸಿ ನೋಡುತ್ತಾನೆ, ಅದು ಏನು? ಊಹೂಃ ಗೊತ್ತಾಗಲಿಲ್ಲ. ನಿಧಾನವಾಗಿ ಅದರತ್ತ ಕೈ ಚಾಚಿ ಆರ್ದ್ರನಾಗುತ್ತಾನೆ, ಅದಾಗಲೇ ಅವನ ಕೈಜಾರಿದೆ. ಆದರೆ ಏನದು? ಅವನ ಮನದಲ್ಲೊಂದು ಪ್ರಶ್ನೆ ಮೂಡುತ್ತದೆ, ಮತ್ತೆ ಅದರತ್ತ ದೃಷ್ಟಿ ಹಾಯಿಸಿ ನೋಡುತ್ತಾನೆ. ಅದು ಕೈಗೆಟುಕುತ್ತಿಲ್ಲ ಮತ್ತು ಕೈಗೆಟುಕದು ಕೂಡ. ಅಷ್ಟರಲ್ಲಿ ಅದು ಅವನ ಕಣ್ಣಿಗೆ ಮಿಂಚಿದಂತೆ ಕಾಣುತ್ತದೆ, ಸಣ್ಣಗೆ ಚೀತ್ಕರಿಸುತ್ತಾನೆ...

ಹೌದು! ಇದೆ? ನಾನು ಹುಡುಕುತ್ತಿದ್ದದ್ದು ಇದೆ? ನಾನು ಕಳೆದು ಕೊಂಡಿದ್ದು ಇದೆ?

ಅದರೆಡೆಗೆ ದೃಷ್ಟಿ ನೆಟ್ಟು ಕುಳಿತುಕೊಂಡು ಬಿಕ್ಕುತ್ತಾನೆ. ಅದು ಅವನು ವರ್ಷಗಳ ಕಾಲ ತನ್ನ ಜೊತೆಗೆ ತುಂಬಾ ಜತನದಿಂದ ಕಾಯ್ದಿರಿಸಿ ಕೊಂಡು, ಇಷ್ಟಿಷ್ಟೇ ಎನುವಷ್ಟು ಕಟ್ಟಿಕೊಂಡಿದ್ದ ಅವನವೇ ಕನಸುಗಳು. ಅವನ ಮನಸ್ಸು ಮರುಗುತ್ತದೆ, ತನ್ನ ಪ್ರತಿ ಕನಸಿಗೂ ಅವನು ಒಂದು ಹೆಸರಿಟ್ಟು ಕೊಂಡಿದ್ದ. ಅವೆಲ್ಲ ಕಳೆದಿವೆ ಅಲ್ಲಿ, ಅಳಿದುಳಿದುದನೆಲ್ಲ ಕೈ ತುಂಬಾ ತುಂಬಿ ಕೊಳ್ಳಲು ಧಾವಿಸುತ್ತಾನೆ, ಕೈ ಹಿಡಿತ ಬಿಗಿಯಾದಾಗ ಸ್ವಲ್ಪವು ಉಳಿಯದೆ ಜಾರಿ ಹೋಗುವ ಜಲಧಾರೆಯಂತೆ ಅಷ್ಟೂ ಅವನ ಕೈಯಲ್ಲಿ ನಿಲ್ಲಲಾರದೆ ಜಾರುತ್ತವೆ, ಮತ್ತೆ ತಡವರಿಸುತ್ತಾನೆ, ಅವನು ಅಸಹಾಯಕನಂತೆ ನಿಲ್ಲುತ್ತಾನೆ, ಇದನ್ನೆಲ್ಲಾ ಕಳೆದು ಕೊಂಡಿದ್ದೆಲ್ಲಿ ಅನ್ನುವುದು ಅವನಿಗೆ ನೆನಪಿಗೆ ಬರುತ್ತಿಲ್ಲ. ಕಳೆದಿದ್ದನ್ನು ಕಳೆದು ಕೊಂಡಲ್ಲೇ ಹುಡುಕ ಬೇಕು ಎಂಬುದು ಅವನಿಗೂ ಗೊತ್ತಿದೆ, ಆದರೆ ಅವನಿಗೆ ಕಳೆದು ಕೊಂಡ ಸ್ಥಳದ ಗುರುತಿಲ್ಲ, ಇಲ್ಲೇ ಹುಡುಕುತ್ತೇನೆ ಅಂದು ಕೊಂಡು ಹುಡುಕುತ್ತಾನೆ, ಸಿಗಲಾರದು ಎಂಬುದು ಗೊತ್ತಿದ್ದರೂ ಮತ್ತಷ್ಟು ಆಸ್ಥೆಯಿಂದ ಹುಡುಕುತ್ತಾನೆ.

ಅವನು ಹಠಮಾರಿಯೇನಲ್ಲ, ಮೊಂಡನಂತು ಅಲ್ಲವೇ ಅಲ್ಲ. ಏನೋ ಮಾಡಲು ಹೊರಡುತ್ತಾನೆ. ಸೋಲುತ್ತೇನೆ ಎಂಬ ಇಲ್ಲದ ಭಯ ಅವನ ಮನವನ್ನು ಕಾಡುತ್ತದೆ. ಆ ಭಯದಿಂದಲೇ ಇನ್ನು ತನ್ನಿಂದಾಗದು ಎಂದು ಕೈ ಚೆಲ್ಲಿ ಕುಳಿತು ಕೊಳ್ಳುತ್ತಾನೆ, ಜೊತೆಗೆ ಅವನ ಆಂತರ್ಯದ ಶಕ್ತಿ ಕುಂದುತ್ತದೆ. ಅವನಿಗೆ ಗೆದ್ದು ಗೊತ್ತೇ ಇಲ್ಲ ಎಂಬಂತೇನು ಇಲ್ಲ. ಅವನು ಕಳೆದು ಕೊಂಡ ಎಲ್ಲ ಕನಸುಗಳು ಅವನೇ ಹೆಣೆದ ಸಂಕೀರ್ಣಗಳು, ಅದು ಅವನೇ ಬರೆದಿಟ್ಟ ಅವನದೇ ಬದುಕಿನಧ್ಯಾಯದ ಹೊನ್ನಿನ ಸಾಲುಗಳು, ಆದರೆ ಈಗ ಅವೆಲ್ಲ ಅವನಿಂದಾಗುತ್ತಿಲ್ಲ.

ಅವನು ಈಗ ಇನ್ನಾತರಲ್ಲೋ ಸೋತಿದ್ದಾನೆ, ಆ ಸೋಲು ಅವನನ್ನು ಯಾವ ಪರಿ ಹೆದರಿಸಿದೆಯೆಂದರೆ ನನ್ನಿಂದ ಏನು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದಾನೆ. ತನ್ನ ಪ್ರತಿ ಸೋಲಿಗೂ ಒಂದು ಕಾರಣ ಕೊಡುತ್ತಾನೆ. ಅವನು ಸೋಲಿನ ಗುಂಗಿನಿಂದ ಹೊರ ಬರುತ್ತಿಲ್ಲ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಲು ಇಲ್ಲ, ಅದು ತಪ್ಪು ಎಂಬುದರ ಅರಿವು ಅವನಿಗೂ ಇದೆ. ಆದರೆ ಸೋಲಿನಲ್ಲೇ ಅವನು ನೆಮ್ಮದಿ ಹುಡುಕುತ್ತಿದ್ದಾನೆ, ಸೋಲಿನ ನೋವು ಅವನಿಗೀಗ ಹಿತವೆನಿಸುತ್ತಿದೆ, ಅದಕ್ಕೇ ಒಗ್ಗಿ ಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ತನ್ನಿಂದ ಗೆಲ್ಲಲಾಗದು ಎಂದು ಈಗಾಗಲೇ ತೀರ್ಮಾನಿಸಿ ಬಿಟ್ಟಿದ್ದಾನೆ, ಪ್ರತಿ ಕನಸಿಗೂ "ಸೋತಿದ್ದೇನೆ, ನನ್ನಿಂದ ಸಾಧ್ಯವಿಲ್ಲ" ಎಂದು ಒಂದು ಅಡಿ ಬರಹ ಬರೆದು ನೇತು ಹಾಕ ಹೊರಟಿದ್ದಾನೆ.

ಎಲ್ಲಾ ಕನಸುಗಳನ್ನು ಕೋಣೆಯ ಮೂಲೆಗೆ ಗುಡಿಸಿದ್ದಾನೆ. ಈಗ ಅವನ ಕಣ್ಣಂಚಿನಲ್ಲಿ ಒಂದು ಹನಿ ಕಣ್ಣೀರು ಇಲ್ಲ, ತುಂಬಾ ಇಷ್ಟ ಪಟ್ಟು ಓದಿ ಮುಗಿಸಿದ ಪುಸ್ತಕದ ಕೊನೆಯ ಪುಟವನ್ನು ಇನ್ನೊಮ್ಮೆ ಎಂದು ಓದುವಂತೆ ಮೂಲೆ ಸೇರಿದ ಕನಸುಗಳತ್ತ ಕೊನೆಯ ಬಾರಿಗೆಂಬಂತೆ ದೃಷ್ಟಿ ಹಾಯಿಸುತ್ತಾನೆ. ಎಲ್ಲಾ ಮುಗಿಯಿತೇನು? ಎಂದು ಮನಸ್ಸಿಗಷ್ಟೇ ಕೇಳುವಂತೆ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

ಮತ್ತೆ ಮೇಲ್ಚಾವಣಿಯಿಂದ ಏನೋ ಕೆಳಗೆ ಬಿದ್ದು ಒಡೆದ ಸದ್ದು, ತಿರುಗಿ ನೋಡುತ್ತಾನೆ ಅಲ್ಲಿ ಇನ್ನೊಂದು ಕನಸು ಬಿದ್ದು ಒಡೆದಿದೆ ಅದರ ಹೆಸರೇ ಬದುಕು.

ಮಂಗಳವಾರ, ಏಪ್ರಿಲ್ 7, 2009

ಕೊನೆಗೂ ಶಾಂಭವಿ ಮೇಡಂಗೆ ಹುಡುಗ ಗೊತ್ತಾಯ್ತು!!!

"ಪ್ರಭು, ಶಾಂಭವಿ ಮೇಡಂಗೆ ಗಂಡು ಸಿಕ್ಕಾಯ್ತು, ನೆನ್ನೆ ರಾತ್ರಿಯೇ ನಿಮಗೆ ಫೋನ್ ಮಾಡ್ಬೇಕು ಅಂತ ಅಂದ್ಕೊಂಡಿದ್ದೆ, ಒಳ್ಳೆಯದಾಯ್ತಲ್ವ, ನಂಗೆ ಖುಷಿಯಾಯ್ತು."

"ಹೌದು ಮುಕುಂದ್ ನಂಗು ಗೊತ್ತಾಯ್ತು ನಮ್ಮ ಅತ್ತಿಗೆ ಹೇಳಿದ್ರು, ಕೊನೆಗೂ ಗಂಡು ಸಿಕ್ತಲ್ಲ ಸದ್ಯ, ಮ್ಯಾಟ್ರಿಮೋನಿಯಲ್ ನಲ್ಲಿ ನೊಂದಾಯಿಸಿಕೊಂಡಿದ್ದು ಎಷ್ಟು ಒಳ್ಳೆದಾಯ್ತಲ್ವ ಅವರಿಗೆ, ಹುಡುಗಾನು ಒಳ್ಳೆಯವನು ಅನ್ಸುತ್ತೆ. ಏನೋ ಬಿಡಿ ಸದ್ಯ ಈಗ ಸ್ವಲ್ಪ ಮನಸ್ಸಿಗೆ ಖುಷಿಯಾಯ್ತು."

ನಾನವತ್ತು ಕಚೇರಿಗೆ ಹತ್ತು ನಿಮಿಷ ತಡ, ನನ್ನ ಎಡ-ಬಲದಲ್ಲಿ ಕುಳಿತು ಕೊಳ್ಳುವ ಸಹೋದ್ಯೋಗಿಗಳ ನಡುವೆ ಪುಂಖಾನುಪುಂಖವಾಗಿ ಹೀಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಇವರಿಬ್ಬರು ಒಂದೇ ಊರಿನವರಲ್ಲ, ತೀರ ಹಳೆ ಪರಿಚಯದವರು ಅಲ್ಲ, ಸರಿ ಸುಮಾರು ಒಂದು ವರ್ಷದಿಂದ ಒಂದೇ ಸೂರಿನಡಿ ಕೆಲಸ ಮಾಡುತ್ತಿರುವುದರಿಂದ ಸ್ವಲ್ಪ ಜಾಸ್ತಿಯೆನ್ನುವಷ್ಟು ಆತ್ಮೀಯ ಗೆಳೆಯರು. ಇದೆಲ್ಲ ಯಾಕೆ ಹೇಳುತ್ತಿದ್ದೀನೆಂದು ಯೋಚಿಸುವಿರ, ಕಾರಣ ಇಷ್ಟೇ ಇವರಿಬ್ಬರು ಗೆಳೆತನದಲ್ಲಿ ಎಷ್ಟು ಹಳಬರೋ ಇವರಿಬ್ಬರ ಜೊತೆ ನನ್ನ ಗೆಳೆತನವು ಅಷ್ಟೆ ಹಳತು. ಆದರೆ ಶಾಂಭವಿ ಮೇಡಂ ಯಾರು? ಎಂಬುದು ನನ್ನ ಪಾಲಿಗೆ ಒಂದು ಯಕ್ಷ ಪ್ರಶ್ನೆಯಂತಾಗಿತ್ತು. ಇಬ್ಬರ ಮುಖದಲ್ಲೂ ಅದೆಂತಹುದೋ ಸಮಾಧಾನ, ತಮ್ಮ ಮನೆಯ ಮಗಳಿಗೆ ಕಷ್ಟ ಪಟ್ಟು ಹುಡುಗನ ಹುಡುಕಿ ಇನ್ನೇನು ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ತರಾತುರಿಯಲ್ಲಿ ನನ್ನ ಇಬ್ಬರು ಸಹೋದ್ಯೋಗಿಗಳಿದ್ದಂತೆ ಕಂಡರು.

ನಾನು ಕುತೂಹಲ ತಡೆಯಲಾಗದೆ ಕೇಳಿದೆ "ಮುಕುಂದ ಯಾರು ಶಾಂಭವಿ ಮೇಡಂ", ಮುಕುಂದ ಕೂಡಲೇ "ಪ್ರಭು, ಇವನಿಗೆ ಶಾಂಭವಿ ಮೇಡಂ ಗೊತ್ತಿಲ್ಲ ನೋಡು" ಅಂದ. ನನಗೀಗ ಇನ್ನು ಕುತೂಹಲ ಹೆಚ್ಚಾಯಿತು ಪ್ರಭುವಿನ ಕಡೆ ತಿರುಗಿ ಕೇಳಿದೆ "ಯಾರೋ ಶಾಂಭವಿ ಮೇಡಂ". ಪ್ರಭು ಮಾತಿಗೆ ಶುರುವಿಟ್ಟ "ರಾಜು ಶಾಂಭವಿ ಮೇಡಂ ಗೊತ್ತಿಲ್ಲ ಅಂದ್ರೆ ಹೇಗೋ, ಎಷ್ಟು ಸಮಯದಿಂದ ಹುಡುಗನನ್ನು ಹುಡುಕುತ್ತಿದ್ದರು ಗೊತ್ತ, ಎಲ್ಲಿ ಜನ ಮಾರಾಯ ನೀನು, ಮುಕುಂದ ಇವನಿಗೆ ಏನು ಹೇಳೋದೋ?" ಅಂದ.

ನನ್ನ ಸಹನೆ ಮೀರಿತ್ತು "ಹೇಳೋ ಇಷ್ಟ ಇದ್ದರೆ ಹೇಳಿ, ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ" ಅಂದೆ. ಮುಕುಂದ ಕೂಡಲೇ ಕೇಳಿದ "ರಾತ್ರಿ :೩೦ ಕ್ಕೆ - ಟಿ. ವಿ ಯಲ್ಲಿ 'ಮುಕ್ತ ಮುಕ್ತ' ಧಾರವಾಹಿ ನೋಡಲ್ವೇನೋ?". ಒಂದು ಕಡೆ ನಗು ಇನ್ನೊಂದು ಕಡೆ ಸಿಟ್ಟು ಒತ್ತರಿಸಿ ಬಂದಿದ್ದು ಸುಳ್ಳಲ್ಲ. "ಶಾಂಭವಿ ಮೇಡಂ" ಮುಕ್ತ-ಮುಕ್ತ ಧಾರಾವಾಹಿಯ ಒಂದು ಪಾತ್ರವಂತೆ.

ಧಾರಾವಾಹಿಗಳು ಮತ್ತು ಧಾರಾವಾಹಿಯ ಪಾತ್ರಗಳು ನಮ್ಮ ನಡುವಲ್ಲೇ ನಡೆವ ಸನ್ನಿವೇಶಗಳು ಮತ್ತು ನಮ್ಮ ಮನೆಯ ಅವಿಭಾಜ್ಯ ಅಂಗಗಳೇನೋ ಎಂಬಂತೆ ಆಗಿ ಹೋಗಿದೆ, ನೋಡುವ ಪ್ರತಿಯೊಬ್ಬರೂ ಇದರಲ್ಲಿ ಅದೆಷ್ಟು ತಲ್ಲೀನರು ಅಂದರೆ ಒಂದು ದಿನವು ತಪ್ಪಿಸದೇ ನೋಡುತ್ತಾರೆ, ಅಕಸ್ಮಾತ್ ತಪ್ಪಿದರೆ ಏನೋ ಕಳೆದು ಕೊಂಡ ಅನುಭವ.

ಆಗ ನಾನು ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ, ಎಂದಿನಂತೆ ಮಧ್ಯಾನ್ಹ ಕಾಲೇಜು ಮುಗಿಸಿ ಮನೆಗೆ ಬಂದು ಬಾಗಿಲು ತಟ್ಟಿದವನಿಗೆ ಬಾಗಿಲು ತೆರೆದು ಎದುರಾಗಿದ್ದು ನನ್ನ ಅಜ್ಜಿ, ಪ್ರತಿ ದಿನ ಕಾಲೇಜಿನಿಂದ ಬಂದವನಿಗೆ ಊಟ ಮಾಡ್ತೀಯ ಅಂತ ಕೇಳಿ, ಊಟ ಬಡಿಸುತ್ತಿದ್ದ ಅಜ್ಜಿ ಅವತ್ತು ಎಂದಿನಂತಿರಲಿಲ್ಲ, ಒಂದೇ ಸಮನೆ ಅಳು, ಏನಾಯ್ತು ಅಂದರೆ ಕಾರಣ ಹೇಳಲು ಸಾಧ್ಯವಾಗದಷ್ಟು ಜೋರಾಗಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ನಾನು ದಿಕ್ಕೇ ತೋಚದಂತಾಗಿ ಕೇಳಿದೆ "ಏನಾಯ್ತು ಹೇಳಜ್ಜಿ". ಅಜ್ಜಿ ಅಳುತ್ತಲೇ ಶುರು ಮಾಡಿದರು "ಸುಮತಿಗೆ ಯಾರೋ ಚಾಕು ಹಾಕಿ ಬಿಟ್ಟರು, ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ, ಸಂಜೆ ಕ್ಕೆ ಬರ್ತಾರಲ್ಲ ಅದೇ ಡಾಕ್ಟ್ರು ಈಗಲೇ ಏನು ಹೇಳೋದಕ್ಕೆ ಆಗಲ್ಲ ಅಂದ್ರು, ಪಾಪಿ ಅವನಿಗೆ ಕೊಲೆ ಮಾಡ್ಲಿಕ್ಕೆ ಹುಡುಗೀನೆ ಬೇಕಿತ್ತಾ, ಅವಳು ಅದೆಷ್ಟು ನೊಂದಿದ್ದಾಳೆ ಈಗಾಗಲೇ" ನಾನು ಒಂದು ಕ್ಷಣ ಅವಕ್ಕಾದೆ, ಈಗ ಏನು ಮಾಡೋದು ಅಂತ ಯೋಚಿಸುವ ಮುನ್ನ ನೆನಪಾಗಿದ್ದೆಂದರೆ ಸುಮತಿ ಎಂಬ ಹೆಸರಿನವರು ನನಗೆ ತಿಳಿದ ಮಟ್ಟಿಗೆ ನಮ್ಮ ಕುಟುಂಬದಲ್ಲಿ ಅಥವಾ ನಮ್ಮ ಪರಿಚಯಸ್ಥರಲ್ಲಿ ಯಾರು ಇಲ್ಲ, ಕೊನೆಗೆ ಅಜ್ಜಿಗೆ ಮರು ಪ್ರಶ್ನೆ ಕೇಳಿದೆ ಅಂದ ಹಾಗೆ ಸುಮತಿ ಯಾರು?. ಈಗ ಅಜ್ಜಿಗೆ ಕೋಪ ಬಂದಿತ್ತು "ಬೇಕುಪ್ಪ ಸುಮತಿ ಗೊತ್ತಿಲ್ವ, :೩೦ ಕ್ಕೆ ಧಾರವಾಹಿ ಅವಳು", ಮತ್ತೆ ನನಗೆ ಮಾತೆ ಹೊರಡಲಿಲ್ಲ.

ಹೀಗೆ ಒಮ್ಮೆ ನಮ್ಮ ಅಮ್ಮನ ಪರಿಚಯದವರೊಬ್ಬರು ಮನೆಗೆ ಬಂದವರು ಅಮ್ಮನ ಬಳಿ ಮಾತನಾಡುತ್ತಾ "ಮಗನಿಗೆ ಎಲ್ಲೂ ಹುಡುಗಿ ಸಿಗಲಿಲ್ಲ, ಯಾರಾದರು ಬಡವರ ಮನೆ ಹೆಣ್ಣಾದರು ಪರವಾಗಿಲ್ಲ ಒಳ್ಳೆಯವಳಾಗಿದ್ದರೆ ಸಾಕು, ನಿಮಗೆ ಎಲ್ಲಾದರು ಗೊತ್ತಿದ್ದರೆ ಹೇಳಿ" ಅಂದರು. ಒಳಮನೆಯಿಂದ ಬಂದ ಅಜ್ಜಿ ಕೂಡಲೇ "ಸಂಜೆ :೩೦ ಕ್ಕೆ ಗುಪ್ತಗಾಮಿನಿಯಲ್ಲಿ ಬರ್ತಾಳಲ್ವ ಭಾವನ ಅವಳಿಗೂ ಹುಡುಗನ್ನ ನೋಡುತ್ತಿದ್ದಾರೆ, ನಂಗೆ ಚೆನ್ನಾಗಿ ಗೊತ್ತು ಅವಳು ತುಂಬಾ ಒಳ್ಳೆ ಹುಡುಗಿ ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ಳುವುದಾದರೆ ನೋಡಿ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಾಗ ಅಮ್ಮನಿಗೂ, ನನಗು, ಮತ್ತು ಬಂದವರಿಗೂ ನಗು ತಡೆಯಲಾಗಿರಲಿಲ್ಲ.

ಭಾನುವಾರ, ಮಾರ್ಚ್ 15, 2009

ಬದುಕಿನ ಖಾಲಿ ಕ್ಯಾನ್ವಾಸ್ ಮೇಲೆ ಪ್ರೀತಿ ಎಂದಷ್ಟೇ ಬರೆದು...

ಪಿಸು ಮಾತು - ೪

ನಾಲ್ಕು ಗೋಡೆಯ ನಡುವಲ್ಲಿ ನಾವಿಬ್ಬರೂ ಮಾತ್ರ, ಎದುರು ಬದುರಿನ ಗೋಡೆಗೆ ಒರಗಿ ಕುಳಿತು ಗಡಿಯಾರವನ್ನು ದಿಟ್ಟಿಸಿದರೆ ಸಮಯ ರಾತ್ರಿಯ ೧೧:೪೫, ಎದುರು ಕುಳಿತಿದ್ದ ಗೆಳೆಯ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ ಎಂಬಂತೆ ತಲೆ ತಗ್ಗಿಸಿ ಕುಳಿತಿದ್ದ. ಇಬ್ಬರ ನಡುವು ನೀರವ ಮೌನ, ಏನೋ ಹೇಳಲೆಂಬಂತೆ ಹೊರಟು ಮತ್ತೆ ಮಾತು ಮುಂದುವರಿಸಲಾರದೆ ನಿಟ್ಟುಸಿರು ಬಿಡುತ್ತಾನೆ, ಅಮೂರ್ತದಲ್ಲಿ ದೃಷ್ಟಿಯನ್ನು ಬೆರೆಸಿ ನಿಸ್ಸಹಾಯಕವಾಗಿ ಸಣ್ಣಗೆ ನರಳುತ್ತಾನೆ. ಮತ್ತೆ ನಾನು ಮೌನ ಮುರಿಯುತ್ತೇನೆ "ಏನಾಯ್ತು, ಹೇಳು?", ಒತ್ತರಿಸಿ ಬರುವ ದುಃಖದ ಮಡುವನ್ನು ತಡೆದು ನಿಲ್ಲಿಸಿ "ಹ್ಮೂ" ಎಂದಷ್ಟೇ ಉದ್ಗರಿಸಿ ಕಣ್ಣು ಮುಚ್ಚುತ್ತಾನೆ.

"ಬೆಳಕು ಕಣ್ಣು ಚುಚ್ಚಿದಂತಾಗುತ್ತಿದೆ, ದಯವಿಟ್ಟು ಸ್ವಲ್ಪ ಹೊತ್ತು ದೀಪ ಆರಿಸುತ್ತೀಯ? ದಯವಿಟ್ಟು ಕಣೋ" ದೀನನಾಗಿ ಗೊಗರೆವ ದನಿಯಲ್ಲಿ ಕೇಳುತ್ತಾನೆ. ನಾನು ದೀಪವಾರಿಸಿ ಕುಳಿತು ಕೊಳ್ಳುತ್ತೇನೆ. ಅಮಾವಾಸ್ಯೆಗೆ ಇನ್ನೆರಡೆ ದಿನ, ಚಂದಮಾಮ ಬಹುತೇಕ ಕರಗಿದ್ದಾನೆ. ಇಡೀ ಕೋಣೆಯ ತುಂಬ ಕತ್ತಲು ವಿಕಾರವಾಗಿ ನರ್ತಿಸುತ್ತಿದೆಯೇನೋ ಎಂಬ ಭಾವ, ಅವನ ಎದೆಯಾಳದ ನೋವಿನುರಿ ಮತ್ತವನ ಉಸಿರಾಟದ ಉಚ್ಚ್ವಾಸ-ನಿಚ್ಚ್ವಾಸಗಳ ಹೊರತು ಇನ್ನಾವ ಸದ್ದು ಅಲ್ಲಿಲ್ಲ, ಅವನ ಬಿಸಿಯುಸಿರು ತಣ್ಣಗಿನ ಕೋಣೆಯ ಕಾವನ್ನು ಏರಿಸುತ್ತಿರುವಂತಿತ್ತು. ತನ್ನ ಕಾಲುಗಳನ್ನು ನೀಳವಾಗಿ ಚಾಚಿ, ಗೋಡೆಗೆ ತನ್ನ ದೇಹದ ಸಂಪೂರ್ಣವಾದ ಜವಾಬ್ದಾರಿಯನ್ನು ಹಸ್ತಾಂತರಿಸಿದಂತೆ ಕುಳಿತ. ಕಡು ಕತ್ತಲಿನಲ್ಲಿ ಒಂದು ಕಪ್ಪು ಆಕೃತಿಯ ಚಲನೆಯ ಹೊರತಾಗಿ ಇನ್ನೇನು ಕಾಣದಂತಹ ನಿರ್ವಿಕಾರ ಭಾವ.

ಇದೆ ಕತ್ತಲಿಗಾಗಿ ಕಾತರಿಸುತ್ತಿದ್ದವನಂತೆ ನನ್ನ ಹೆಸರನ್ನಷ್ಟೇ ಮೇಲು ದನಿಯಲ್ಲಿ ಉದ್ಗರಿಸಿದ. ನೀನು ಕರೆದಿದ್ದು ಕೇಳಿಸ್ತು ಎಂಬಂತೆ ನಾನು "ಹೇಳು" ಎಂದೆ. ಸಣ್ಣ ದನಿಯಲ್ಲಿ ಕಣ್ಣೀರು ಚೆಲ್ಲುತ್ತಿದ್ದವನ ದುಃಖದ ಮಡುವನ್ನು ಸೀಳಿ ಮಾತೊಂದು ಹೊರ ಬಿತ್ತು. "ಅವಳು ನನ್ನನ್ನು ಬಿಟ್ಟು ಹೋದಳು, ಅವಳ ಮನೆಯಲ್ಲಿ ಒಪ್ಪುತ್ತಿಲ್ಲವಂತೆ, ಅವಳಿಗೂ ನಾನೀಗ ಬೇಡವಂತೆ. ನನ್ನಿಂದ ಆಗುತ್ತಿಲ್ಲ ಕಣೋ, ಸೋಲುತ್ತಿದ್ದೇನೆ, ನನಗೆ ಈ ಬದುಕು ಬೇಡ ಕಣೋ" ಕಣ್ಣೀರ ಕಟ್ಟೆ ಒಡೆದಿತ್ತು, ಅವನ ವರುಷಗಳ ಶ್ರದ್ದೆಯ ಪ್ರೀತಿಯ ಕನಸ ಗೋಪುರ ಏಕಾ ಏಕಿ ಕುಸಿದಿತ್ತು, ಇನ್ನೇನನ್ನು ಹೇಳಲಾರೆ ಎಂಬಂತೆ ಅವನ ಅಳು ನೂರ್ಮಡಿಸುತ್ತಿತ್ತು. ಸಮಾಧಾನಿಸುವ ಪ್ರಯತ್ನವನ್ನು ಮಾಡದೆ ಸುಮ್ಮನೆ ಕುಳಿತೆ. ಸಮಾಧಾನದ ಮಾತು ಕೂಡ ತೀರ ಕಠೋರ ಎಂದೆನಿಸಿ ಬಿಡ ಬಹುದಾದ ಸೂಕ್ಷ್ಮ ಕ್ಷಣವದು, ಅವನ ದುಃಖದ ರಭಸ ಮಲೆನಾಡಿನ ಮುಂಗಾರಿನ ಭರವನ್ನು ಮೀರಿಸುವಂತಿತ್ತು.

ಪ್ರೀತಿಯ ಸಾವಿಗೆ ಅದರ ಆರಂಭಕ್ಕೆ ಸಿಗುವಂತೆ ಒಂದು ನಿಖರವಾದ ತಾರೀಖು ಸಿಗಲಾರದಂತೆ, ಏಕೆಂದರೆ ಅದೊಂದು ಧೀರ್ಘ ಪ್ರಕ್ರಿಯೆ. ಅದು ಒಂದು ವ್ಯವಸ್ಥಿತ ಹೊಂಚು. ಅವಳು/ಅವನು ಪ್ರೀತಿಸ್ತಿಯ ಅಂತ ಕೇಳಿ, ಹೌದು ನಾನು ನಿನ್ನನ್ನು ಪ್ರೀತಿಸ್ತಿದ್ದೇನೆ ಅಂದು ಆ ತಾರೀಖನ್ನು ತನ್ನ ದಿನಚರಿಯ ಪುಟದ ಮೂಲೆಯಲ್ಲಿ ಅತ್ಯಂತ ಪ್ರೀತಿ ಆದರಗಳಿಂದ ತಿದ್ದಿಟ್ಟು, ಕಳೆದ ವರ್ಷಗಳ ಲೆಖ್ಖ ಹೇಳಬಹುದೇನೋ, ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಹೇಳುವುದು ಬಹುಶಃ ಅಸಾಧ್ಯ. ಅಪ್ಪ-ಅಮ್ಮ, ಜಾತಿ ಇವುಗಳು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು, ಆದರೆ ಇಲ್ಲಿ ಗಮನಿಸ ಬೇಕಾದ ವಿಷಯ ಇವ್ಯಾವು ತಮ್ಮ ತಪ್ಪಿಗೆ ಅವರು ಕೊಡುತ್ತಿರುವ ಕಾರಣಗಳಲ್ಲ, ತಾವು ಮಾಡಿದ್ದು ಸರಿಯೆಂಬುದಕ್ಕೆ ಅವರು ನೀಡುವ ಸಮಜಾಯಿಷಿಗಳು. ಪ್ರೀತಿಸುತ್ತೇನೆ ಎನ್ನುತ್ತಾ ನಿಂತಿರುವಾಗ ಅದೇ ಅಪ್ಪ-ಅಮ್ಮ ಇನ್ನೆಲ್ಲೋ ತನ್ನ ಮಗ-ಮಗಳ ಬರುವಿಕೆಗೆ ಕಾದು ಕುಳಿತಿರುತ್ತಾರೆ, ಆಗ ಆ ದಿನ ಹೆತ್ತವರ ನೆನಪು ಬಂದರೆ ಅದು ನಿಜಕ್ಕೂ ಗೌರವಯುತ, ಅಂತಹವರನ್ನು ತುಂಬು ಹೃದಯದಿಂದ ಗೌರವಿಸೋಣ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಈ ಸಂಭಂದ ಇನ್ನು ಮುಂದುವರಿಸಲಾರೆ ಎಂಬ ನಿರ್ಧಾರಕ್ಕೆ ಬಂದು ನಿಲ್ಲುತ್ತಾರಲ್ಲ ಅದು ನಿಜಕ್ಕೂ ಒಂದು ಹೀನ ಕೃತ್ಯ. ದಿನ ಜೊತೆ ನಡೆದವರು ಬೇಡವಾಗಿರುತ್ತಾರೆ, ತನ್ನೆಲ್ಲ ನೋವಿಗೆ ದನಿಯಾದವರು ಹೊರೆಯೆನಿಸಿರುತ್ತಾರೆ. ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ ಅದರ ಅಗತ್ಯವಿಲ್ಲ ಎಂದು ಮನಸ್ಸಿಗೆ ಅನ್ನಿಸಿ ಬಿಡುತ್ತದೆ.

ಒಂದು ಒಳ್ಳೆ ಪ್ರೀತಿಯ ಸಂಬಂಧ ಶ್ರಧ್ಧೆಯನ್ನು ಬೇಡುತ್ತದೆ ಮತ್ತು ಪರಸ್ಪರರ ಬಗ್ಗೆ ನಂಬಿಕೆ, ವಿಶ್ವಾಸವನ್ನು ಬಯಸುತ್ತದೆ, ಅದು ಒಂದು ದಿನದಲ್ಲಿ ದಿಢೀರ್ ಎಂದು ಬೆಳೆದು ನಿಲ್ಲಲಾರದಂತೆ, ಅದು ಸಮಯ ಕೇಳುತ್ತದೆ, ದಿನ ಕಳೆದಂತೆ ಪಕ್ವ ಗೊಳ್ಳುತ್ತಾ ಸಾಗುತ್ತದೆ. ಆದರೆ ಈಗಿನ ಯಾಂತ್ರಿಕ ಯುಗದಲ್ಲಿ ಪ್ರೀತಿ ಸಹ ತನ್ನ ಸೊಬಗನ್ನು ಕಳೆದು ಕೊಳ್ಳುತ್ತಾ ಅರ್ಥ ಹೀನವಾಗುತ್ತಿದೆ. ಶ್ರದ್ದೆಯಿಲ್ಲದ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಕಾಣುತ್ತದೆ. ಅವನೇ ಎಲ್ಲ ಎಂದು ಕೊಂಡು ಬದುಕುತ್ತಿದ್ದ ಹುಡುಗಿಗೆ ಹೊರ ಜಗತ್ತು ಇನ್ನಷ್ಟು ರಂಗು ರಂಗಾಗಿ ಕಾಣುತ್ತದೆ, ಮತ್ತು ಇಷ್ಟು ದಿನ ಜೊತೆಯಲ್ಲಿದ್ದು ಉಸಿರಾದವನು ಬಣ್ಣ ಕಳೆದು ಕೊಂಡು ಬಿಳಿಚಿ ಕೊಂಡಂತೆ ಭಾಸವಾಗಿರುತ್ತಾನೆ. ಅಲ್ಲೀಗ ಅಪ್ಪ-ಅಮ್ಮನ ಮತ್ತು ಜಾತಿಯ ಸಬೂಬು ಆರಂಭವಾಗಿ ಬಿಡುತ್ತದೆ. ನಿಜವಾದ ಪ್ರೀತಿ ಹೇಗಾದರು ಮಾಡಿ ಎಲ್ಲವನ್ನು ಎದುರಿಸಿ ಎಲ್ಲರನ್ನು ಒಪ್ಪಿಸೋಣ ಎಂದೆನ್ನುತ್ತದೆ, ಆದರೆ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರದಲ್ಲಿರುತ್ತದೆ. ಇಲ್ಲಿ ಉಳಿದು ಹೋದ ಜೀವ ನರಳುತ್ತದೆ, ತಾನು ಉಳಿದು ಹೋದದ್ದಕ್ಕೆ ಕಾರಣ ಹುಡುಕಿ ಹುಡುಕಿ ಸೋಲುತ್ತದೆ, ತನ್ನ ಬಗ್ಗೆ ಒಂದು ವಿಧವಾದ ಕೀಳರಿಮೆ ಬೆಳೆಸಿಕೊಂಡು ಕತ್ತಲಿಗಾಗಿ ಹಪಹಪಿಸಿ ಮರುಗುತ್ತದೆ. ವರ್ಷಗಟ್ಟಲೆ ಕಟ್ಟಿದ ಪ್ರೀತಿಯ ಗೋಪುರ ಕೆಲವೇ ದಿನಗಳಲ್ಲಿ ನೆಲ ಸಮವಾಗಿರುತ್ತದೆ.

ಗೆಳೆಯ ಕಣ್ಣೀರಾಗಿ ಸೋತಿದ್ದ, ಅವನ ಕೈಯನ್ನು ನನ್ನ ಕೈಯಲ್ಲಿಟ್ಟು ಹೇಳಿದೆ "ಒಂದು ಒಳ್ಳೆಯ ಬದುಕನ್ನು ಬದುಕಿ ಬಿಡು, ಅವಳ ನೆನಪೇ ಬಾರದಂತ ಬದುಕು. ಈ ಬದುಕನ್ನು ಸಂಪೂರ್ಣವಾಗಿ ಬಾಳಿ ಬಿಡು, ಇಷ್ಟು ದಿನ ನಿಮ್ಮಲ್ಲಿದ್ದಿದ್ದು ಪ್ರೀತಿಯಲ್ಲ, ಅದೊಂದು ಸೆಳೆತವಷ್ಟೇ, ಪ್ರೀತಿ ಹೀಗಿರೋದಿಲ್ಲ. ಅದು ಯಾವತ್ತು ಸೋಲಲು ಬಿಡಲಾರದ ಅದಮ್ಯ ಶಕ್ತಿ. ಜೀವನದ ಬಗ್ಗೆ ಅತೀವ ಶ್ರದ್ದೆಯಿರಲಿ ಮತ್ತು ನಿನ್ನ ಜೊತೆ ನಾನಿದ್ದೇನೆ ಗೆಳೆಯನಾಗಿ, ನಿನ್ನೆಲ್ಲ ನೋವ ದನಿಗೆ ಕಿವಿಯಾಗಿ".

ಮರು ಉತ್ತರ ನೀಡಲು ಚೈತನ್ಯವಿರದೆ ಗೆಳೆಯ ನನ್ನ ಮಡಿಲಿಗೆ ಕುಸಿದಿದ್ದ, ಗದ್ಗದಿತನಾಗಿ ನನ್ನೆಡೆಗೆ ನೋಡದೆ ಕೇಳಿದ "ಅವಳು ನನ್ನನ್ನು ಯಾರಿಗೋಸ್ಕರ ತ್ಯಾಗ ಮಾಡಿದಳು". ನಾನು ಸುಮ್ಮನೆ ನಕ್ಕು ನುಡಿದೆ "ಗೆಳೆಯ ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ, ಪ್ರೀತಿಯಿಂದ ಹೊರ ನಡೆವವರು ತಮಗೆ ಇನ್ನೊಂದು ಉತ್ತಮ ಅನ್ನುವ ಆಯ್ಕೆಯ ಕಡೆ ವಲಸೆ ಹೊರಟಿರುತ್ತಾರಷ್ಟೇ, ಬಿಟ್ಟು ಹೋಗುವ ಮುನ್ನ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಇನ್ನೊಂದು ಅಸ್ತ್ರವೇ ಈ ತ್ಯಾಗ, ನಮ್ಮಲ್ಲಿ ಯಾರು ಕಾಣದ ಬದುಕಿಗೆ ಕೈಯಲ್ಲಿರುವುದನ್ನು ತ್ಯಾಗ ಮಾಡಿ ಹೋಗುವವರಿಲ್ಲ, ಅದು ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ."

ಗೆಳೆಯ ನಿದ್ರೆಗೆ ಜಾರಿದ್ದ, ಯಾಕೋ ನನಗೆ ಅರಿವಿಲ್ಲದಂತೆ ಮನಸ್ಸು ಕದಡಿತ್ತು. ಮತ್ತೆ ಹೊರಗಣದ ಚಂದಮಾಮ ಪೂರ್ಣನಾಗುವುದೆಂದು ಎಂಬ ಪ್ರಶ್ನೆಯೊಂದಿಗೆ ಕುಳಿತೆ, ಮತ್ತೆ ನನ್ನ ಆ ಸಾಲುಗಳು ನೆನಪಾಗಿ ಕಾಡಿದವು.
"ಜೊತೆ ನಡೆದ ಹಾದಿಯಲಿ ನೀನಿಲ್ಲದಿರೆ ಏನು
ನಿನ್ನ ಹೆಜ್ಜೆ ಗುರುತುಗಳುಂಟು
ನನ್ನ ಬದುಕ ಜೋಳಿಗೆ ಖಾಲಿಯಾಗಿದ್ದರೆ ಏನು
ಹೊರಲಾರದೆ ನೀ ಎಸೆದು ಹೋದ ಕನಸ ರಾಶಿಯಿಲ್ಲುಂಟು
ನಮ್ಮ ಪ್ರತಿ ಸೋಲಿಗೂ ಇದ್ದೆ ಇದೇ ಒಂದು ಸಂಬಂಧದ ನಂಟು
ಮತ್ತೆ ಜಿಗಿದೆದ್ದು ನಾ ಸೋಲಲಾರೆನೆಂದು ಕೂಗಿ ಹೇಳುವುದುಂಟು"