ಸೋಮವಾರ, ಏಪ್ರಿಲ್ 20, 2015

ಧ್ಯಾನ


(ಚಿತ್ರ ಕೃಪೆ: ಅಂತರ್ಜಾಲ)

ಅನುಭಾವದನುಭವದ ಅಚ್ಚರಿಯು ಅನುರಣಿಸಿ
ಅನುದಿನವೂ ಮನವ ಕಾಡುತಲಿರಲು
ಕಾರ್ಮುಗಿಲ ನಡುವಿಂದ ಕೋಲ್ಮಿಂಚು ಸುಳಿದಂತೆ
ಕಗ್ಗತ್ತಲಾ ನಡುವೆ ಕಿಡಿಯೊಂದು ಇಣುಕಿರಲು

ಧಾರಿಣಿಯ ಮೈ ಮೇಲೆ ಜಾರಿದಾ ಹನಿಯೊಂದು
ಕಣ್ಣೀರೋ ಪನ್ನೀರೋ ಮಳೆ ನೀರೋ ಅರಿಯದೆ
ಅಸ್ಥಿತ್ವ ಕಳೆದು ಕರಗಿರಲು ಮಡಿಲಿನೊಳು

ಹೆಜ್ಜೆಯೆಷ್ಟಿಟ್ಟರು ಮತ್ತೆ ಗಾವುದ ಹೆಚ್ಚು
ನಡೆದಷ್ಟೂ ದೂರಕು ಸವೆಯದಿರೆ ದಾರಿ

ನಿರ್ಭಾವ ನಿರ್ಭೀಡೆಗಳ ನಡುವೆ
ಗೋಳಿಡುವ ಓ ಮನವೇ
ಜಗದ ಗೊಡವೆಗೆ ಹೋಗದಿರು ನೀನು
ನಿನಗೇಕೆ ಇಲ್ಲ ಸಲ್ಲದ ಬೇವಸು

ಕರಗಿರಲು ಶಬ್ಧಾಂತರಾಳದ ಭಾವಧಾರೆಯೊಳು
ತನುವು ಮುಷ್ಟಿ ಬಿಗಿಯಲಿ ಜಲವ ಹಿಡಿದಿಡುವ ಭರದಿ
ಬಿಟ್ಟು ಬಿಡು ಮನವನ್ನು ಹಾರಿ ಹೋಗಲಿ ದೂರ
ತಾನೇ ಮರಳಲಿ ಹಾಗೆ ಹಕ್ಕಿ ಗೂಡ ಸೇರುವ ತೆರದಿ

(ಬಹಳ ದಿನಗಳ ನಂತರ ಹಾಗೆ ಸುಮ್ಮನೆ ಧ್ಯಾನದ ಕುರಿತ ಚಿಂತನೆಯಲ್ಲಿ ಉಧ್ಭವಿಸಿದ ಕವನ)

ಕಾಮೆಂಟ್‌ಗಳಿಲ್ಲ: