ಬುಧವಾರ, ಅಕ್ಟೋಬರ್ 14, 2009

ನಾನಿನ್ನು ಬರ್ತೀನಿ... ಅಲ್ಲಿ ಸಿಗೋಣ.

ನಾನಿವತ್ತು ಬೀಗ ಹಿಡಿದು ಕೊಂಡೆ ಬ್ಲಾಗಿನ ಕಡೆ ಬಂದಿದ್ದು, ನಾನಾಗಲೆ ತೀರ್ಮಾನಿಸಿಯಾಗಿತ್ತು ಇವತ್ತಿನಿಂದ ನನ್ನ ಬ್ಲಾಗಿಗೆ ದೊಡ್ಡದೊಂದು ಬೀಗ ಹಾಕಲೇ ಬೇಕು ಅಂತ. ಇದಕ್ಕೆ ಕಾರಣ ಹಲವು, ಅದರಲ್ಲಿ ಬಹು ಮುಖ್ಯವಾದದ್ದು ಬ್ಲಾಗರ್ ಕೆಲವು ತಾಂತ್ರಿಕ ಲೋಪ-ದೋಷಗಳು ಮತ್ತೆ ಕೆಲವು ನ್ಯೂನ್ಯತೆಗಳು. ಈಗ ಹೊಸದೊಂದು ಬ್ಲಾಗಿನರಮನೆಯನ್ನು ಕಟ್ಟಿಕೊಂಡು ಅತ್ತ ವಲಸೆ ಹೊರಟಿದ್ದೇನೆ ಹೊರಟವನು ಮನೆಯ ನೆನಪಿನ ಬುತ್ತಿಯನ್ನು ಹೊತ್ತು ಹೊರಟಿದ್ದೇನೆ. ನನ್ನ ಬ್ಲಾಗಿಗೆ ವರುಷ ತುಂಬಿದ್ದಷ್ಟೇ ಅಲ್ವ, ಹಾಗಾಗಿ ಈಗ ಹೊಸ ಮನೆಗೆ ಕರೆದೊಯ್ಯುತ್ತಿದ್ದೇನೆ. ಮತ್ತೆ ಎಂದಿನಂತೆ ನೀವು ಜೊತೆಯಿರುತ್ತೀರಿ ಎಂಬ ವಿಶ್ವಾಸದಲ್ಲಿ, ನನ್ನ ಹೊಸ ಮನೆ ತೀರ ದೂರವೇನು ಇಲ್ಲ, ನಿಮ್ಮಿಂದ ಕೇವಲ ಇನ್ನೊಂದೇ ಕ್ಲಿಕ್ ನಷ್ಟು ದೂರದಲ್ಲಿದೆ. ಪ್ರೀತಿಯಿಂದ ಆಜ್ಞಾಪಿಸುತ್ತಿದ್ದೇನೆ ನೀವು ಬರಲೇ ಬೇಕು, ಬರಲಿಲ್ಲ ಅಂದ್ರೆ ನೋಡಿ ಮತ್ತೆ, ಚೆನ್ನಾಗಿರೋಲ್ಲ. ನಿಮ್ಮನ್ನು ಸ್ವಾಗತಿಸುವುದಕ್ಕೆ, ನಿಮ್ಮ ದಾರಿ ಕಾಯುತ್ತ ನನ್ನ ಹೊಸ ಮನೆಯ ಬಾಗಿಲಲ್ಲಿ ಕುಳಿತಿರುತ್ತೇನೆ.



ಮಂಗಳವಾರ, ಅಕ್ಟೋಬರ್ 6, 2009

ಭಯ


ಕನಸೇ ಕದಲದ ಕಾರಿರುಳ ರಾತ್ರಿಯೊಳು
ನೆನಪ ಅಗೆದಗೆದು ತೆಗೆವ ಹುಚ್ಚನಿವ ಅಕ್ಷರಾರ್ಥಃ
ಇವನೆದೆಗೆ ಏನು ಒಗ್ಗುವುದಿಲ್ಲ, ಇವನ ನಿಂದನೆಗೆ
ಸಕಲವೂ ಎದೆ ಸುಡುವ ಜ್ವಲನ ಪದಾರ್ಥ

ಯಶದ ಹಾದಿಯ ಸರಣಿಯಾರಂಭಕು ಮುನ್ನ
ನಿರ್ಲಿಪ್ತ ಮೋರೆ ಹೊತ್ತು ಗುರಿಯ ದಿಟ್ಟಿಸುವನು
ದುಡಿದು ದಣಿಯುವ ಮುನ್ನ ವಿಶ್ರಾಂತಿ ಬೇಕಂತೆ
ಗಾವುದವು ಹೆಜ್ಜೆ ಊರದ ಎಗ್ಗ ಗಾವಿಲನು

ಬದುಕ ಶಪಿಸುತ್ತಾನೆ, ಒಳಗೆ ಕೊರಗುತ್ತಾನೆ
ಕುಸಿದು ಮರುಗುತ್ತಾನೆ ಮೂಢನಿವನು
ಸೂರ್ಯ ರಶ್ಮಿಯ ಕಾಂತಿ ಕಂಡೊಡನೆ ಮತಿ ಭ್ರಾಂತಿ
ಅಕ್ಷಿ ಪಟಲವ ಮುಚ್ಚಿ ಜಗ ಕತ್ತಲೆನ್ನುವವನಿವನು

ಒಳಗೆ ಕುಳಿತಿಹನಂತೆ, ಕಂಡು ಕಾಣದ ಹಾಗೆ
ಕಿಡಿಯ ಸೋಕಿಸಿ ಹೊತ್ತಿಸುತ ಎದೆಯ ಬೇಗೆ

ಮುಟ್ಟಿ ನೋಡಿರಿ ಒಮ್ಮೆ ಮಗ್ಗುಲು ಬದಲಿಸುವನು
ಇವನದೀಗ ನಿಮ್ಮೆದಯ ಅಂಗಳದಿ ಪಾರ್ಶ್ವ ಶಯನ
ಇವನಿಂದ ಅಡ್ಡಿ ನೂರೆಂಟು ಆತಂಕ ಇದಿರುಂಟು
ತಡೆದು ನಿಲ್ಲಿಸುವ ನಿಮ್ಮ ಹಿಡಿಯಲಾರದ ಹಾಗೆ ಗುರಿಯ ಅಯನ

ಬಲು ಚಿಕ್ಕ ಬದುಕಿಹುದು ಅಕ್ಕರೆಯು ಇರಲೆದೆಗೆ
ನಡೆವ ಹಾದಿಯ ಗುರಿಯು ಅಪರಿಮಿತವು
ಹೆಡೆಮುರಿಯ ಕಟ್ಟಿ ತಳ್ಳಿ ಬಿಡಿ ಇವನನ್ನು
ಶಾಶ್ವತವಾಗಿ ಏರಿ ಬಿಡಲಿವನು ಮರಣ ಶಯನ

"ನನ್ನ ಬ್ಲಾಗಿನಲ್ಲಿ ಮೊದಲ ಕವನ ಪ್ರಕಟಿಸಿ ಒಂದು ವರ್ಷ ಸಂದಿದೆ, ಬರೆದಿದ್ದು ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಜೊಳ್ಳೇ ಹೆಚ್ಚು ಎಂಬುದು ನನ್ನ ಮನದ ಅಂಬೋಣ. ಆದರು ಒಂದು ವರ್ಷದ ಅವಧಿಯಲ್ಲಿ ಬ್ಲಾಗು ನನಗೆ ಅನೇಕ ಆತ್ಮೀಯ ಗೆಳೆಯ, ಗೆಳತಿಯರನ್ನು, ಅಕ್ಕರೆಯ ಅಕ್ಕಂದಿರನ್ನು ಮತ್ತು ನಲ್ಮೆಯ ಅಣ್ಣಂದಿರನ್ನು ನೀಡಿದೆ, ಪ್ರತಿ ಬರಹ ಪ್ರಕಟಿಸಿದಾಗ ಜೊತೆ ನಿಂತು ತಿದ್ದಿ, ಪ್ರೋತ್ಸಾಹಿಸಿದ ನಿಮಗೆಲ್ಲ ನಾನು ಆಭಾರಿ. ನಿಮ್ಮ ಪ್ರೀತಿ ನನ್ನ ಜೊತೆ ಹೀಗೆ ಇರಲಿ ಎಂದು ಆಶಿಸುತ್ತೇನೆ."