ಶುಕ್ರವಾರ, ಏಪ್ರಿಲ್ 17, 2009

ಅಸ್ತಿತ್ವವೇ ಇಲ್ಲದ ಮೀನಿನ ಕಣ್ಣೀರಾಗಿತ್ತು ನನ್ನಳಲು ಅಂದು

ಪಿಸು ಮಾತು - ೫

(ಹುಡುಗಿಯ ಮನಸ್ಸಿನ ತುಮುಲಗಳು ಹೇಗಿರಬಹುದು ಪ್ರೀತಿಯಿಂದ ಹೊರ ನಡೆದಾಗ ಅನ್ನೋದು ಒಂದು ಯಕ್ಷ ಪ್ರಶ್ನೆಯೇ ಸರಿ, ಹೀಗಿರಬಹುದೇನೋ ಎಂದು ಊಹಿಸಿಕೊಂಡು ಈ ಪತ್ರ ಬರೆದಿದ್ದೇನೆ. ಅಂದ ಹಾಗೆ ಇದು ನನ್ನ ಹಿಂದಿನ ಬರಹಗಳಿಗೆ ಮತ್ತು ಧರಿತ್ರಿಯಲ್ಲಿ ಪ್ರಕಟವಾಗಿರುವ ಪ್ರೇಮ ಪತ್ರಕ್ಕೆ ಉತ್ತರ ನೀಡುವ ಬಾಲಿಶ ಪ್ರಯತ್ನ. ಎಂದಿನಂತೆ ತಪ್ಪಿದ್ದರೆ ಕ್ಷಮಿಸಿ ತಿದ್ದುತ್ತೀರಿ ಎಂಬ ನಂಬಿಕೆಯಿದೆ.)

ಪ್ರೇಮ ಲೋಕದ ಹಿಮ ಬಿಂದು,

ಹೀಗೆ ಕರೆಯುವ ಮುನ್ನ "ನನ್ನ ಪ್ರೀತಿಯ" ಅಂತ ಸೇರಿಸಲು ಯಾಕೋ ಇವತ್ತು ಮನಸ್ಸು ಕೇಳುತ್ತಿಲ್ಲ ಗೆಳೆಯ, ನಾನು ಆ ಯೋಗ್ಯತೆ ಕಳೆದುಕೊಂಡಿದ್ದೇನೆ ಎಂದು ನೀನು ಹೇಳುತ್ತೀಯೇನೋ, ನನ್ನ ಬಳಿ ಅದಕ್ಕೆ ಉತ್ತರವಿಲ್ಲ. ನೀನೂ ನನಗಿನ್ನು ಬೇಡ ಎಂದು ತೀರ್ಮಾನಿಸಿ ನಿನ್ನೆದುರು ಹಾಗೆ ನಿಂತು ಕಣ್ಣಿಗೆ ಕಣ್ಣು ಬೆರೆಸಲಾಗದೆ ಒತ್ತರಿಸಿ ಬರುತ್ತಿದ್ದ ದುಃಖ ತಡೆದು ಕ್ಷಮಿಸಿ ಬಿಡು ಇಲ್ಲಿಂದ ಮುಂದೆ ನಾವು ಒಂದೇ ದಾರಿಯಲ್ಲಿ ಸಾಗಲಾರೆವು ಎಂದು ನಾನೇ ಅಂದ ಕ್ಷಣ ನನಗೆ ಈ ಭೂಮಿ ಇಲ್ಲೇ ಬಾಯಿ ಬಿಟ್ಟು ಬಿಡಬಾರದೆ ಎಂದೆನಿಸಿದ್ದು ಸುಳ್ಳಲ್ಲ. ಪ್ರೀತಿಸಲು ನೂರು ಕಾರಣಗಳು ಬೇಕು, ಪ್ರೀತಿ ನಿರಾಕರಿಸಲು ಕಾರಣವೇ ಬೇಕಾಗುವುದಿಲ್ಲ ಎಂಬ ನಿನ್ನ ಮಾತನ್ನು ನಾನು ಎಂದಿಗೂ ಒಪ್ಪಲಾರೆ ಗೆಳೆಯ. ಇಂದು ಈ ಪ್ರೀತಿ ಮುಂದುವರೆಸಲು ಸಾಧ್ಯವಿಲ್ಲ ಎಂದೆನಲು ನನ್ನಲ್ಲಿ ಸಾವಿರ ಕಾರಣಗಳಿವೆ ಹುಡುಗ.

ನಿನ್ನಲ್ಲಿಂದ ಬಂದು ಅಮ್ಮನಿಗೆ ಮುಖವನ್ನು ತೋರಿಸದೇ ನೇರ ಸ್ನಾನ ಗೃಹಕ್ಕೆ ಹೋದವಳು, ಅನಾಮತ್ತು ೫ ಬಿಂದಿಗೆ ತಣ್ಣೀರು ಸುರಿದು ಕೊಂಡಿದ್ದೆ, ಆ ತಣ್ಣೀರಿನ ನಡುವೆ ನನ್ನ ಕಣ್ಣೀರು ಕಾಣದೆ ಹೋಗಿ ಬಿಡಲೆಂದು. ನನ್ನಿಂದ ಆಗಲಿಲ್ಲ ಗೆಳೆಯ, ಅಮ್ಮನಿಗೆ ಮುಖ ಕೊಟ್ಟು ಮಾತನಾಡಲಾಗಲಿಲ್ಲ, ಅಪ್ಪನ ಮಾತಿಗೆ ಉತ್ತರಿಸಲಾಗಲಿಲ್ಲ. ನಿನ್ನನ್ನು ಪ್ರೀತಿಸಿದ ಮೇಲೆ ನನ್ನ ಮನೆಯಲ್ಲಿ ನಾನು ಪರಕೀಯಳೇನೋ ಎಂದೆನಿಸಲಾರಂಭಿಸಿ ಬಿಟ್ಟಿತು ಕಣೋ.

"ನನ್ನ ಮುದ್ದು ಮಗಳೇ ನಿನಗೆ ಒಬ್ಬ ಒಳ್ಳೆ ಹುಡುಗನನ್ನು ನೋಡಿ ಅಂಗಳಕ್ಕೆಲ್ಲ ಚಪ್ಪರ ಹಾಕಿ, ಚೆಂದದ ಅಲಂಕಾರದಲ್ಲಿ, ಗುರು ಹಿರಿಯರ ಎದುರಲ್ಲಿ, ಮತ್ತು ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟು, ಊರಿನವರೆಲ್ಲ ಎಷ್ಟು ಚೆನ್ನಾಗಿತ್ತು ಮದುವೆ, ಹಸೆ ಮಣೆಯ ಮೇಲೆ ನಿನ್ನ ಮಗಳು ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಳು, ಅದೆಷ್ಟು ಮುದ್ದಾಗಿದ್ದಾಳೋ ನಿನ್ನ ಮಗಳು ಎಂದೆನ್ನ ಬೇಕು" ಎಂದು ಅಪ್ಪ ನನ್ನ ತಲೆ ನೇವರಿಸಿ ನುಡಿದಾಗ ನೀನು ಅದೆಷ್ಟು ನೆನಪಾಗಿದ್ದೆ ಗೊತ್ತಾ ಗೆಳೆಯ, ನಾನು ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಅಪ್ಪನ ಮಡಿಲಲ್ಲಿ ಮುಖ ಹುದುಗಿಸಿ ಮಲಗಿದರೆ, ಆಗ ಕಣ್ಣೀರು ತುಂಬಿ ಅಪ್ಪ ಏನೆಂದರು ಗೊತ್ತ "ಅಪ್ಪ-ಅಮ್ಮನ್ನ ಬಿಟ್ಟು ಹೋಗ ಬೇಕು ಅಂತ ಅಳ್ತೀಯಲ್ಲೋ ಕಂದ, ನನಗೆ ಗೊತ್ತು ನಿನಗೆ ಎಷ್ಟು ಕಷ್ಟ ಆಗುತ್ತೆ ಅಂತ, ಎಲ್ಲರೆದುರು ನಿನ್ನ ಮದುವೆ ತುಂಬಾ ಚೆನ್ನಾಗಿ ಮಾಡಿ ಕೊಡಬೇಕು ಅನ್ನೋದೇ ನನ್ನ ಆಸೆ, ನಿನ್ನ ನೋಡಿ ಎಲ್ಲಾರು ಎಂತಹ ಸಂಸ್ಕಾರದಿಂದ ಮಗಳನ್ನು ಬೆಳೆಸಿದ್ದಾನೆ ಅಂತ ಖುಷಿ ಪಡಬೇಕು, ಮತ್ತು ನಾನು ಅವರ ಮಾತು ಕೇಳಿ ಹೆಮ್ಮೆ ಪಡಬೇಕು." ಎಂದು ಹೇಳಿ, ಅಮ್ಮನ ಕುರಿತು "ನೋಡೇ ನಮ್ಮ ಮಗಳು ಮದುವೆ ಆಗಿ ಅಪ್ಪ-ಅಮ್ಮನ್ನ ಬಿಟ್ಟು ಹೋಗೋದಿಲ್ಲ ಅಂತ ಅಳ್ತಾ ಇದ್ದಾಳೆ." ಎಂದಾಗ ಅದಕ್ಕೆ ದನಿಗೂಡಿಸಿದ ಅಮ್ಮ "ಪುಟ್ಟ, ನಿಮ್ಮಪ್ಪನ ಒಂದೇ ಒಂದು ಆಸೆ ಕಣೋ ಬಂಗಾರಿ ಇದು, ನೀನು ಮದುವೆ ಆಗಲೇ ಬೇಕು ಕಂದ, ಹಠಮಾಡ ಬಾರದು ಚಿನ್ನಾ" ಅಂತ ನನ್ನ ಅಪ್ಪಿ ಹಿಡಿದಿದ್ದಳು. ಯಾಕೋ ನೀನು ನನ್ನ ತಬ್ಬಿ ಹಿಡಿದಿದ್ದು ಕೂಡ ಇಷ್ಟು ಹಿತವಾಗಿರಲಿಲ್ಲವೇನೋ ಅಂತ ಮೊದಲ ಬಾರಿಗೆ ಅನ್ನಿಸಿ ಬಿಟ್ಟಿತು ಕಣೋ ಗೆಳೆಯ.

ರಾತ್ರಿಯೊಬ್ಬಳೆ ಕೋಣೆ ಸೇರಿ ಸದ್ದೇ ಮಾಡದೆ ಅದೆಷ್ಟು ಅತ್ತು ಬಿಟ್ಟಿದ್ದೆ ಗೊತ್ತ ಗೆಳೆಯ, ನೀನು ತುಂಬಾ ನೆನಪಾಗಿದ್ದೆ ಅವತ್ತು. ನಾನು ಪ್ರೀತಿಸಿ ತಪ್ಪು ಮಾಡಿದೆನೇನು ಎಂಬ ಪ್ರಶ್ನೆ ಜೀವ ಹೋಗುವಷ್ಟು ಕಾಡಿದ್ದೆ ಆ ರಾತ್ರಿ. ನೀನು ಯಾವಾಗಲು ಹೇಳ್ತೀಯಲ್ಲ "ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವೆ ಮಾಡಿ ಕೊಡ ಬೇಕು ಅಂತ ನಿರೀಕ್ಷಿಸೋದು ತಪ್ಪು, ಒಪ್ಪಿದರೆ ಸಂತೋಷ, ಒಪ್ಪದಿದ್ದರೆ ನಾವು ಮದುವೆ ಆಗಿ ಇವರಿಬ್ಬರನ್ನು ಬೇರೆ ಮಾಡಿದ್ದಿದ್ದರೆ ಎಂತಹ ತಪ್ಪಾಗುತ್ತಿತ್ತು ಅಂತ ಅವರಿಗೇ ಅನ್ನಿಸಿ ಬಿಡುವಷ್ಟು ಚೆಂದಗೆ ಬದುಕಿ ಬಿಡೋಣ", ನಿನ್ನ ಜೀವನ ಪ್ರೀತಿಗೆ ನೀನೆ ಸಾಟಿ ಗೆಳೆಯ, ಆದರೆ ನನ್ನಿಂದ ಇಂದು ಸಾಧ್ಯವಾಗುತ್ತಿಲ್ಲ ಕಣೋ. ಯಾಕೋ ನನಗೆ ಇವತ್ತು ಈ ಮಾತು ಇಷ್ಟ ಆಗುತ್ತಿಲ್ಲ ಕ್ಷಮಿಸಿ ಬಿಡು ಗೆಳೆಯ. ನನ್ನ ಮದುವೆಗೆ ಚಪ್ಪರ ಇರಲೇ ಬೇಕು, ನನಗೋಸ್ಕರ ಅಲ್ಲದಿದ್ದರೂ ಅಪ್ಪ-ಅಮ್ಮನಿಗೊಸ್ಕರ ಮತ್ತು ಅವರ ಗೌರವಕ್ಕೋಸ್ಕರ. ನನ್ನಪ್ಪ ಅಂದರೆ ಊರಿನವರಿಗೆಲ್ಲ ತುಂಬು ಗೌರವ, ಅದನ್ನು ನಮ್ಮ ಸ್ವಾರ್ಥಕ್ಕಾಗಿ ಕಳೆದು ಬಿಡಲೇನೋ ಗೆಳೆಯ.

ಅಪ್ಪ-ಅಮ್ಮ ನಮ್ಮ ಪ್ರೀತಿಗೆ ಒಪ್ಪಲಾರರು ಗೆಳೆಯ ನಮ್ಮಿಬ್ಬರದು ಬೇರೆ ಬೇರೆ ಜಾತಿ, ಮತ್ತು ಜಾತಿ ಬಿಟ್ಟವಳು ಎಂದೆನಿಸಿ ಕೊಂಡು ನಿನ್ನ ಜೊತೆ ಬಂದು ಬಿಡಲು ನಾನು ಸಿದ್ಧಳಾದರು. ನಾಳೆ ನಮ್ಮ ಮಗುವಿನದು ಯಾವ ಜಾತಿ ಗೆಳೆಯ. ನೀನು ಯಾವಾಗಲು ಹೇಳುತ್ತಿದ್ದೆಯಲ್ಲ ಜಗತ್ತಿನಲ್ಲಿರುವುದು ಕೇವಲ ಎರಡೇ ಜಾತಿ ಒಂದು ಗಂಡು-ಇನ್ನೊಂದು ಹೆಣ್ಣು ಅಂತ, ಆದರೆ ಇದನ್ನು ಯಾವ ಅರ್ಜಿಯ ಜಾತಿಯ ಕಾಲಂ ನಲ್ಲಿ ಬರೆದರೆ ನಮ್ಮ ಸರ್ಕಾರ ಮಾನ್ಯತೆ ನೀಡುತ್ತದೆ ಹೇಳು ಹುಡುಗ, ನಮ್ಮದು ಹೆಸರಿಗಷ್ಟೇ ಕಣೋ ಜಾತ್ಯಾತೀತ ರಾಷ್ಟ್ರ. ನಾನು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದ ಕ್ಷಣ ಅಪ್ಪ-ಅಮ್ಮನನ್ನು ಕಳೆದು ಕೊಂಡು ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತಿತ್ತು ಕಣೋ ಹುಡುಗ.

ನಿನ್ನನ್ನು ನೆನಪಿಸಿಕೊಂಡು ನಾನು ರಾತ್ರಿಯಿಡೀ ಅತ್ತಿದ್ದೇನೆ ಗೆಳೆಯ, ಆದರೆ ಹುಡುಗಿ ನೋಡು ನಿನ್ನಂತೆ ಎಲ್ಲವನ್ನು ಎದುರಿಸಿ ನಿಂತು ಘರ್ಜಿಸುವ ಶಕ್ತಿಯಿಲ್ಲದೆ ಹೋಯಿತು. ಅಮ್ಮ ತಾನು ಗಂಜಿ ಕುಡಿದು ನನಗೆ ಅನ್ನ ಮಾಡಿ ಹಾಕಿದ್ದಾಳೆ, ಅಪ್ಪ ಅದೇ ತನ್ನ ಹಳೆಯ ಅಂಗಿಗೆ ತೇಪೆ ಹಾಕಿಸಿ ಕೊಂಡು ನನಗೆ ಹೊಸ ಬಟ್ಟೆ ಹಬ್ಬಕ್ಕೆ ಅಂತ ತಂದು ಕೊಟ್ಟಿದ್ದಾರೆ.

ರಾತ್ರಿ ಹೊತ್ತು ಆಕಾಶದ ಚಂದಿರನನ್ನು ನೋಡು, ನಾನು ನೋಡುತ್ತೇನೆ, ಅವನಲ್ಲೂ ಕಲೆಗಳಿವೆಯಂತೆ ಪ್ರೀತಿಯಲ್ಲಿ ನನ್ನ ತಪ್ಪುಗಳಿದ್ದಂತೆ, ಅವನಲ್ಲಿ ನಿನ್ನನ್ನು ಕಾಣಲು ಯತ್ನಿಸುತ್ತೇನೆ. ಆದರೆ ಕಣ್ಣೀರ ಬೆಲೆ ಅರ್ಥವಾಗದವಳು ಎಂದೆನ್ನ ಬೇಡ ಗೆಳೆಯ, ನಿನ್ನ ಕಣ್ಣ ಬಿಂದುಗಳನ್ನು ತಡೆಯ ಬೇಕೆಂದು ಮನಸ್ಸು ನುಡಿದರು, ಆಂತರ್ಯ ಅಳುಕಿತ್ತು, ದೂರ ಹೋಗ ಹೊರಟವಳು ಮತ್ತೆ ನಿಂತು ನಕ್ಕು ಹೊರಡುವುದು ತರವಲ್ಲ ಅಲ್ವೇನೋ ಹುಡುಗ, ಮತ್ತೆ ನನಗೆ ನಿನ್ನ ಪಾಲಿನ ದೌರ್ಬಲ್ಯ ಎಂದೆನಿಸಿ ಕೊಳ್ಳುವುದು ಬೇಕಾಗಿರಲಿಲ್ಲ. ಮತ್ತೆ ನಾಳೆಯಿಂದ ನಾನಿರದ ಬದುಕಿನಲಿ ನಿನ್ನ ಕಣ್ಣೀರ ಬಿಂದುವನ್ನು ನೀನೆ ಒರೆಸಿ ಕೊಳ್ಳಬೇಕು ಕಣೋ.

"ವರ್ಷಗಟ್ಟಲೆ ಜತನದಿಂದ ಓದಿ ಕೊನೆಗೆ ಪರೀಕ್ಷೆಯನ್ನು ಬರೆಯಗೊಡದೆ ನೀನು ಅನುತ್ತೀರ್ಣ ಎಂದು ಘೋಷಿಸುತ್ತೀಯೇನೆ ಹುಡುಗಿ" ಅಂತ ನನ್ನನ್ನು ಪ್ರಶ್ನಿಸುತ್ತೀಯ ಗೆಳೆಯ, ಕ್ಷಮಿಸಿ ಬಿಡೋ ಪರೀಕ್ಷಿಸುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೇನೆ. ನಿನ್ನನ್ನು ಬಿಟ್ಟು ಹೊರಟು ಹೋಗುವುದು ನಾನು ಮಾಡುವ ಮೋಸ, ಅತ್ಯಾಚಾರ, ದ್ರೋಹ ಅಂತಾದರೆ, ಹೆತ್ತವರ ಆಸೆಗೆ ಮಣ್ಣೆರಚಿ ನಿನ್ನ ಜೊತೆಗೆ ಬಂದಾಗ ಅಪ್ಪ-ಅಮ್ಮನಿಗೆ ನನ್ನಿಂದ ಆಗುವ ನೋವಿಗೆ ಹತ್ಯೆ ಎಂದೆನ್ನ ಬಹುದಲ್ಲವೇ ಗೆಳೆಯ, ಕೊಂದು ಬಿಡಲೇ ನನ್ನ ಹೆತ್ತವರನ್ನು, ಉತ್ತರಿಸು ಹುಡುಗ.

ನೀನೆ ಹೇಳಿದಂತೆ ನಾನು ನಿನ್ನ ಬದುಕಿನ ಫುಟ್ ಪಾತ್ ಆಗಿಬಿಡುತ್ತೇನೆ, ನೀನು ನಿನ್ನದೇ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟು ಬಿಡು. ನಿಸರ್ಗವನ್ನು ಪ್ರೀತಿಸ ಹೊರಟಿದ್ದೀಯ, ಆದರೆ ಒಂದಂತು ಸತ್ಯ ಧಾರೆಯೆರೆದಷ್ಟು ದಿನ ನನ್ನ ನಿಷ್ಕಳಂಕ ಪ್ರೀತಿಯನ್ನು ಧಾರೆಯರೆದ ತೃಪ್ತಿಯಿದೆ ನನಗೆ. ಇಲ್ಲಿ ನನ್ನ ಕಣ್ಣ ಬಿಂದುವಿಗೆ ಹೊಣೆಯಾರು ಇಲ್ಲ, ಆದರೆ ನಿನ್ನ ಕಣ್ಣಲ್ಲಿ ಹನಿ ಬಿಂದುವಿಗೆ ಜಾಗ ಮಾಡಿ ಕೊಟ್ಟಿದ್ದಕ್ಕೆ ದಯವಿಟ್ಟು ಕ್ಷಮಿಸಿ ಬಿಡೋ ಗೆಳೆಯ. ಇನ್ನೇನು ಬರೆಯಲಾಗುತ್ತಿಲ್ಲ ನನ್ನಿಂದ, ಕಣ್ಣೀರ ಕಟ್ಟೆ ಒಡೆದಿದೆ ಇಲ್ಲಿ, ಜೊತೆಗೆ ಕೈ ಕೂಡ ನಡುಗುತ್ತಿದೆ ಕಣೋ.

ಇಂತಿ,
-ಅವಳೇ (?)

26 ಕಾಮೆಂಟ್‌ಗಳು:

Ittigecement ಹೇಳಿದರು...

ರಾಜೇಶ್.....

ಸೊಗಸಾಗಿದೆ....

ಧರಿತ್ರಿಯವರದೂ...
ನಿಮ್ಮ ಲೇಖನವನ್ನೂ ಮೂರು ಬಾರಿ ಓದಿದೆ...

ಒಂದಕ್ಕಿಂತ ಒಂದು ಮಿಗಿಲು...!!

ಕಲ್ಪನೆಯ, ಕಾವ್ಯಲೋಕದ ರಸಧಾರೆಯಲ್ಲಿ...
ನಮ್ಮನ್ನು ತೇಲಿಸಿದ್ದಕ್ಕೆ...
ಧನ್ಯವಾದಗಳು....

ಈ ಥರಹದ ಕಲ್ಪನೆಯ ಸ್ಪರ್ಧೆ ನಮ್ಮ್ಜ ಬ್ಲಾಗ್ ಲೋಕಕ್ಕೆ..
ಆರೋಗ್ಯಕರ .... ಅಗತ್ಯ....!

ಇಂಥಹ ಕಲ್ಪನೆ ನಿಮಗೆ ಮಾತ್ರ ಸಾಧ್ಯ....!

ಅಭಿನಂದನೆಗಳು...

PARAANJAPE K.N. ಹೇಳಿದರು...

ರಾಜೇಶ್
ಪತ್ರ ಬಹಳ ಕಾವ್ಯಮಯವಾಗಿದೆ. ಧರಿತ್ರಿಯ ಪತ್ರಕ್ಕೆ ಪ್ರತಿವಾದಿಯಾಗಿ ನಿಮ್ಮ ಈ ಪತ್ರೋತ್ತರ, ಪ್ರೇಮ ಪತ್ರ ಬರೆಯುವವರಿಗೆ ಕೈಪಿಡಿಯ೦ತಿದೆ. ಸುಂದರ ಕಾವ್ಯಾತ್ಮಕ ಪ್ರೇಮಪತ್ರ ಬರೆಯುವುದು ಒಂದು ಕಲೆ, ಅದು ಎಲ್ಲರಿಗೆ ಸಿದ್ಧಿಸಿರುವುದಿಲ್ಲ.

ನಿಜ ಹೇಳಲೇ, ನಿಮ್ಮ ಬ್ಲಾಗನ್ನು ನಾನು ಆಳವಾಗಿ ಓದಿರಲಿಲ್ಲ, ನಿನ್ನೆ ರಾತ್ರಿ ನೀವು ಫೋನ್ ಮಾಡಿದ ನ೦ತರ ಮತ್ತೆ ನಿಮ್ಮ ಬ್ಲಾಗೊಳಗೆ ನುಗ್ಗಿ ಒ೦ದಷ್ಟು ಓದಿದೆ, ಬಹಳ ಚೆನ್ನಾಗಿ ಬರೀತೀರಾ, ಖುಷಿಯಾಯಿತು.

ಧರಿತ್ರಿ ಹೇಳಿದರು...

ಪ್ರೀತಿಯ ಸ್ನೇಹಿತ ರಾಜೇಶ್...

ಭೇಷ್ ಕಣ್ರೀ...ತುಂಬಾ ಚೆನ್ನಾಗೇ ಬರೆದಿದ್ದೀರಾ. ಆರಂಭದಿಂದ ಓದುತ್ತಾ ಹೋದಂತೆ ಕೊನೆಯ ಎರಡು ಪ್ಯಾರಾಗಳು ತುಂಬಾ ಚೆನ್ನಾಗಿವೆ.

"ನಾನು ಮಾಡುವ ಮೋಸ, ಅತ್ಯಾಚಾರ, ದ್ರೋಹ ಅಂತಾದರೆ, ಹೆತ್ತವರ ಆಸೆಗೆ ಮಣ್ಣೆರಚಿ ನಿನ್ನ ಜೊತೆಗೆ ಬಂದಾಗ ಅಪ್ಪ-ಅಮ್ಮನಿಗೆ ನನ್ನಿಂದ ಆಗುವ ನೋವಿಗೆ ಹತ್ಯೆ ಎಂದೆನ್ನ ಬಹುದಲ್ಲವೇ ಗೆಳೆಯ, ಕೊಂದು ಬಿಡಲೇ ನನ್ನ ಹೆತ್ತವರನ್ನು, ಉತ್ತರಿಸು ಹುಡುಗ..." ಹಾಗೆಯೇ ಕೊನೆಯ ಪ್ಯಾರಾ ಕೂಡ..ಹೂವಿನ ದಳಗಳಂತೆ ಭಾವನೆಗಳನ್ನು ಪೋಣಿಸಿಬಿಟ್ಟಿದ್ದೀರಾ. ಖಂಡಿತವಾಗಿಯೂ ಪ್ರೀತಿಸದ ಪ್ರತಿಯೊಬ್ಬ ಹುಡುಗಿಯ ತುಮುಲಗಳು ಇದೇ ಆಗಿರಬಹುದೇನೋ...?! ಅಲ್ವೇ.

ಸದ್ಯದಲ್ಲೇ ಅಣ್ಣ, ತಮ್ಮ, ಅಮ್ಮ, ಸ್ನೇಹಿತನಿಗೆ ಎಲ್ಲಾ ರೀತಿಯ ಪತ್ರಗಳು ಧರಿತ್ರಿಯಲ್ಲಿ ಬರಲಿವೆ..ಸಾಧ್ಯವಾದ್ರೆ ಅಲ್ಲೇಲ್ಲ ಹೀಗೇ ಬರೆಯುತ್ತಾ ಹೋಗಿ ಆಯಿತಾ. ಗುಡ್ ಲಕ್ ರಾಜೇಶ್. ಶುಭವಾಗಲೀ..

-ಧರಿತ್ರಿ

ಸುಧೇಶ್ ಶೆಟ್ಟಿ ಹೇಳಿದರು...

ರಾಜೇಶ್ ಅವರೇ...

ಧರಿತ್ರೀಯವರ ಪತ್ರಕ್ಕೆ ನಿಮ್ಮ ಪ್ರತ್ಯುತ್ತರ ಹೇಗಿರಬಹುದೆ೦ಬ ಕುತೂಹಲದಿ೦ದ ನಿಮ್ಮ ಬ್ಲಾಗಿಗೆ ಬ೦ದೆ.

ಧರಿತ್ರಿಯವರ ಪತ್ರಕ್ಕೆ ತು೦ಬಾ ಚೆನ್ನಾಗಿ ಪ್ರತಿಕ್ರಿಯೆ ಬರೆದಿದ್ದೀರಾ.... ಅವರವರಿಗೆ ಅವರವರದೇ ಕಾರಣಗಳಿರುತ್ತವೆ ಅಲ್ವಾ?

ಹೀಗೆ ಬರೆಯುತ್ತಿರಿ:)

Veena DhanuGowda ಹೇಳಿದರು...

Hi,

Jagathinali adesto preemigalu, avra preethi ge tEre yeliyuvude hige
thapu avnado, avalado yene irali... manasu odedu chidra vaguthe
preethi, novina vishayadali Phd madidiri anisuthe..
Bhavanegalana chennagi varnisisdire :)

shivu.k ಹೇಳಿದರು...

ರಾಜೇಶ್,

ತುಂಬಾ ಚೆನ್ನಾಗಿದೆ...

ಪ್ರೀತಿಸುವ ಹೃದಯಗಳು ಬೇರೆಯಾಗಲು ಕಾರಣಗಳಿವೆಯಲ್ಲ ಅದನ್ನು ಸಮರ್ಥಿಸಿಕೊಳ್ಳುವುದು...ತುಂಬಾ ಕಷ್ಟ....ಅದರೆ..ಈ ಲೇಖನದಲ್ಲಿ ಒಂದು ಹುಡುಗಿಯ ಮನಸ್ಸಿನ ಎಲ್ಲಾ ಭಾವನೆಗಳು, ವೈಯಕ್ತಿಕ ನಿರ್ದಾರಗಳಿಗಿಂತ ತನ್ನನ್ನು ನಂಬಿರುವ, ಹೆತ್ತು ಹೊತ್ತಿರುವವರ ಪರವಾಗಿ ನಿಲ್ಲಲು ಕೊಡುವ ಕಾರಣಗಳಿವೆಯಲ್ಲ ಅವೆಲ್ಲ ತುಂಬಾ ಚೆನ್ನಾಗಿ ಸಮರ್ಥಿಸಿಕೊಂಡಿವೆ...

ಧನ್ಯವಾದಗಳು..

ಸಾಗರದಾಚೆಯ ಇಂಚರ ಹೇಳಿದರು...

ರಾಜೇಶ್,
ಪತ್ರ ತುಂಬಾ ಚೆನ್ನಾಗಿದೆ, ಓದಲು ಬಹಳ ಸಂತಸವಾಗುತ್ತದೆ

Unknown ಹೇಳಿದರು...

ನಮಸ್ತೆ ರಾಜೇಶ್,
ಎಂದಿನಂತೆ ಬರಹ ಚೆನ್ನಾಗಿದೆ...
"ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವೆ ಮಾಡಿ ಕೊಡ ಬೇಕು ಅಂತ ನಿರೀಕ್ಷಿಸೋದು ತಪ್ಪು, ಒಪ್ಪಿದರೆ ಸಂತೋಷ, ಒಪ್ಪದಿದ್ದರೆ ನಾವು ಮದುವೆ ಆಗಿ ಇವರಿಬ್ಬರನ್ನು ಬೇರೆ ಮಾಡಿದ್ದಿದ್ದರೆ ಎಂತಹ ತಪ್ಪಾಗುತ್ತಿತ್ತು ಅಂತ ಅವರಿಗೇ ಅನ್ನಿಸಿ ಬಿಡುವಷ್ಟು ಚೆಂದಗೆ ಬದುಕಿ ಬಿಡೋಣ"ಈ ಸಾಲುಗಳು ತುಂಬಾನೆ ಇಷ್ಟ ಆಯಿತು.. ಏನೋ ನೋವು, ವೇದನೆ ... ಅವಳ ಅಸಹಾಯಕತೆ ಎದ್ದು ಕಾಣುತ್ತಿದೆ....ಆಕೆ ಭಾಂಧವ್ಯಕ್ಕೆ ಒಂದೆಡೆ ಜೀವ ಕೊಟ್ಟು ಇನ್ನೊಂದೆಡೆ ಜೀವ ತೆಗೆದದ್ದನ್ನು ಓದಿ ಬೇಸರವಾಯಿತು.... ಒಟ್ಟಿನಲ್ಲಿ ಪತ್ರವನ್ನು ಒದುವಾಗ ನಾನು ಪತ್ರದಲ್ಲೆ ಮುಳುಗಿಹೋಗಿದ್ದೆ.....
ಧನ್ಯವಾದಗಳು

ದಿವ್ಯಾ ಮಲ್ಯ ಕಾಮತ್ ಹೇಳಿದರು...

ರಾಜೇಶ್...
ತುಂಬಾ ಭಾವನಾತ್ಮಕವಾಗಿದೆ ಪತ್ರ...ಓದುಗರನ್ನು ಸಂಪೂರ್ಣ ತನ್ನೊಳಗೆ ಸೆಳೆದೊಯ್ಯುವ ಅಭೂತಪೂರ್ವ ಶಕ್ತಿ ಇದೆ ಈ ಪತ್ರಕ್ಕೆ! ಬಹುಷಃ ಹುಡುಗಿಯೊಬ್ಬಳು ಎಷ್ಟು ಭಾವಪೂರ್ಣವಾಗಿ ವಿವರಿಸಬಹುದೋ, ಅದನ್ನು ಮೀರಿಸಿ ಬರೆದಿದ್ದೀರಾ... ಅಂತೂ "ದುಃಖ, ನೋವು, ಪ್ರೀತಿ" ವಿಷಯಗಳ ಬರವಣಿಗೆಯಲ್ಲಿ ನಿಮಗೆ ನೀವೇ ಪರ್ಯಾಯ ಅಂತ ಮತ್ತೊಮ್ಮೆ ನಿರೂಪಿಸಿದ್ದೀರಾ :)

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ರಾಜೇಶ್ ಪತ್ರ ತುಂಬ ತುಂಬ ಚೆನ್ನಾಗಿದೆ. ಹಾಗೆ ನಿಮ್ಮ ಜುಗಲ್ ಬಂದಿ ಕೂಡ.
ಹೆಣ್ಣಿನ ಮನಸ್ಸನ್ನು, ಭವನೆಗಳನ್ನು ಅಕ್ಷರರೂಪ ಕೊಡುವುದು ತುಂಬಾ ಕಷ್ಟ. Simply Superb.
ಪ್ರೇಮ, ಬದುಕು, ಹೆತ್ತವರು, ಭವಿಷ್ಯ... ಮನಮುಟ್ಟುತ್ತದೆ, ತಟ್ಟುತ್ತದೆ, ಕಾಡುತ್ತದೆ...

ಮನಸು ಹೇಳಿದರು...

raajesh,
manada tumulate bahala chennagi vivarisdeeri,
good luck!!

ಜ್ಞಾನಮೂರ್ತಿ ಹೇಳಿದರು...

ನಮಸ್ತೆ ರಾಜೇಶ್,

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
ಭಾವನಾತ್ಮಕವಾಗಿ ಮನತಟ್ಟುತ್ತದೆ.
ಅಭಿನಂದನೆಗಳು, ಚಂದದ ಬರಹಕ್ಕೆ.
ಧನ್ಯವಾದಗಳು..

ಜ್ಞಾನಮೂರ್ತಿ

Guruprasad ಹೇಳಿದರು...

ರಾಜೇಶ್
ಪತ್ರ ತುಂಬ ಚೆನ್ನಾಗಿ ಮೂಡಿ ಬಂದಿದೆ.... ತುಂಬ ಚೆನ್ನಾಗಿ ಬರೆದಿದ್ದೀರ...... ಕೊನೆಯ ಮತ್ತೆ ಅದರ ಹಿಂದಿನ ಪ್ಯಾರ ತುಂಬ ಅರ್ಥ ದಿಂದ ಕೂಡಿದೆ .... ಹೀಗೆ ಬರೆಯುತ್ತಿರಿ
ಗುರು

Hema Powar ಹೇಳಿದರು...

ನಿಮ್ಮ ಹಿಂದಿನ ಅಪಭ್ರಂಶು ಲೇಖನ ಓದಿದೆ ರಾಜೇಶ್, ಅದನ್ನು ಓದಿದ ಮೇಲೆ ಇದೇಕೋ ಅದರ ಮುಂದೆ ಸಪ್ಪೆ ಅನಿಸಿತು. ಈ ಬರಹ ಅತೀ ಭಾವುಕತೆ ಒಳಗೊಂಡಿದೆ, ಒಂತರ ಚೆನ್ನಾಗಿದೆ ಮತ್ತು ಹಿಂದಿನ ಲೇಖನಕ್ಕಿಂತ ಕಡಿಮೆ ಚೆನ್ನಾಗಿದೆ. ಒಳ್ಳೆಯ ಪ್ರಯತ್ನ ಮುಂದುವರೆಸಿ.

Prabhuraj Moogi ಹೇಳಿದರು...

ರಾಜೇಶ್ ಪತ್ರ ಅದ್ಭುತವಾಗಿತ್ತು, ಆ ಅನಾಮತ್ತು ಐದು ಬಿಂದಿಗೆ ನೀರು ಸುರಿದುಕೊಂಡೆ ಕಣ್ಣೀರು ಕಾಣದಿರಲೆಂದು ಅಂದಿದ್ದು ಮನಗೆ ತಾಟುವಂತಿತ್ತು... ಹೆಣ್ಣಿನ ಮನಸು ಮೀನಿನ ಹೆಜ್ಜೆ ಯಾರಿಗೂ ಗೊತಾಗಲ್ಲ ಅಂತಾರೆ, ಅಂಥದ್ದರಲ್ಲಿ... ಹುಡುಗಿಯ ಮನದ ಮಾತುಗಳನ್ನು ಕಲ್ಪನೆ ಮಾಡಿದ್ದು ಭಲೆ.. ಕೆಲವೊಮ್ಮೆ ನಾವು ಪ್ರೀತಿಸುವವರಿಗಿಂತ ನಮ್ಮನ್ನು ಪ್ರೀತಿಸುವವರು ಹೆಚ್ಚಾಗಿಬಿಡುತ್ತಾರೆ... ಆಗ ರಾಜಿ ಅನಿವಾರ್ಯ...

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿದೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ರಾಜೇಶ್...
ಹುಡುಗನಾಗಿದ್ದು ಹುಡುಗಿಯೊಬ್ಬಳ ದುಗುಡವನ್ನನುಭವಿಸಿ ಬರೆದಂತೆ ಬರೆದಿದ್ದೀರಿ.
ನಮ್ಮದಲ್ಲದ ಪಾತ್ರವನ್ನು ಅನುಭವಿಸಿ ಬರೆದಾಗಲೂ ಆ ಪಾತ್ರದೊಳವಿಗೆ ಕುಂದುಬಾರದಂತೆ ಚಿತ್ರಿಸುವ ಕಲೆ ನಿಮಗೆ ಚೆನ್ನಾಗಿ ಒಲಿದಿದೆಯೆನಿಸುತ್ತದೆ.
ಬರೆಯುತ್ತಿರಿ.

ಅನಾಮಧೇಯ ಹೇಳಿದರು...

ಭಾವುಕತೆಯಲ್ಲಿ ಅದ್ದಿ ಬರೆದಿರಾ (ಶಾಯಿಯ ಬದಲು)?

ಚೆನ್ನಾಗಿದೆ,ಇಂತಹ ಬರಹ ನಿಮಗೆ ಚೆನ್ನಾಗೇ ಒಲಿದಿರುವಂತಿದೆ. ಪ್ರಯತ್ನಗಳು ಮುಂದುವರೆಯಲಿ.

ವಿನುತ ಹೇಳಿದರು...

ಭಾವನೆಗಳನ್ನು ಚೆನ್ನಾಗಿ ಬಿಚ್ಚಿಟ್ಟಿದ್ದೀರ. ಹ೦ತ ಹ೦ತವಾಗಿ ಕಾರಣಗಳನ್ನು ಬೆ೦ಬಲಿಸಿರುವ ರೀತಿ ಚೆನ್ನಾಗಿದೆ. ಅಭಿನ೦ದನೆಗಳು.

ಏಕಾಂತ ಹೇಳಿದರು...

ಎಲ್ಲೋ ಸುತ್ತಾಡುತ್ತಿದ್ದೋನು ಪಕ್ಕನೆ ನಿಮ್ಮ ಬ್ಲಾಗ್ನೊಳಬಂದೆ. ಮೊದಲ ಗುಟಿಕಿನಲ್ಲೇ ಪತ್ರ ಓದಿ ಮುಗಿಸಿದೆ. ’ಪ್ರೀತಿಸಿದ ಮೇಲೆ ಮನೆಯವರು ಚಪ್ಪರ ಹಾಕಿ ಮದುವಮಾಡಿಕೋಡಬೇಕು ಅಂತಾ ನಿರ‍ೀಕ್ಷಿಸೋದು ತಪ್ಪು’ ಸಾಲು ಮತ್ತೆ ಕಾಡುತ್ತಿದೆ. ಪ್ರಶ್ನೆ ಉತ್ತರ ಅದರಲ್ಲೇ ಹುದುಗಿದೆ.
ಹೀಗೇ ಬರಹವಾಗುತ್ತಿರಿ...

poojitha ಹೇಳಿದರು...

Hi Rajesh

This is heart touching and very inmpessive article. I liked it very much…All d best 4 ur upcoming articles….

ಡಿ.ಟಿ. ತಿಲಕ್ ರಾಜ್ ಹೇಳಿದರು...

ರಾಜೇಶ್ ಸಾರ್‍,
ಭಾವನಾತ್ಮಕವಾಗಿ ಬರೆದು ಮನ ಕಲಕಿದ್ದೀರಿ. ಸೊಗಸಾಗಿದೆ.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರಕಾಶ್ ಸರ್,

ಪ್ರೀತಿಯ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ ಮತ್ತು ಪ್ರೋತ್ಸಾಹಕ್ಕೆ. ನೀವೆಲ್ಲ ಇಷ್ಟು ಹಾರೈಸಿದ್ದ ಕಾರಣಕ್ಕೆ ನನಗು ಒಂದೆರಡು ಸಾಲು ಬರೆಯಲು ಸಾಧ್ಯವಾಗಿದೆ.

------------------------------------------------------------------------------------------------
ಪರಾಂಜಪೆ ಸರ್,

ನಿಮಗೂ ಒಂದು ಮೂಟೆಯಷ್ಟು ಧನ್ಯವಾಗಳು ಹೀಗೆ ಆಗಾಗ ಬರುತ್ತಿರಿ, ನಿಮ್ಮ ಪ್ರತಿಕ್ರಿಯೆಗಳು ಮತ್ತು ಪ್ರೀತಿ ಪೂರ್ವಕ ನುಡಿಗಳು ನನಗೆ ಬರೆಯಲು ಹುಮ್ಮಸ್ಸು ತುಂಬುತ್ತವೆ.

------------------------------------------------------------------------------------------------
ಪ್ರೀತಿಯ ಧರಿತ್ರಿ,

ನಿಮ್ಮ ಪತ್ರಕ್ಕೆ ಉತ್ತರ ನೀಡಲು ತುಂಬಾನೆ ಖುಷಿ ಕೊಟ್ಟಿತು, ಸುಮ್ಮನೆ ಕುಳಿತು ನಿಮ್ಮ ಬ್ಲಾಗ್ ಓದುವಾಗ ಹುಡುಗಿ ಇಂತಹ ಪರಿಸ್ಥಿತಿಯಲ್ಲಿ ಹೇಗೆ ಯೋಚಿಸ ಬಹುದು ಎಂದು ಚಿಂತಿಸಿದೆ, ಅದರ ಫಲಶ್ರುತಿಯೇ ಈ ಪತ್ರ.

------------------------------------------------------------------------------------------------
ಕೃಷ್ಣಮೂರ್ತಿ,

ಧನ್ಯವಾದಗಳು, ಹೀಗೆ ಬರುತ್ತಿರು.

------------------------------------------------------------------------------------------------
ನಲ್ಮೆಯ ಸುಧೇಶ್ ರವರೆ,

ನೀವು ಹೇಳಿದ್ದು ನಿಜ ಪ್ರತಿಯೊಬ್ಬರಿಗೂ ಒಂದು ಸಂಬಂಧದಿಂದ ಹೊರ ಬರಲು ಅವರದ್ದೇ ಆದ ಕಾರಣಗಳಿರುತ್ತವೆ, ಅದು ಜೊತೆಯಿದ್ದವರಿಗೆ ಸರಿಯೆನಿಸುತ್ತೋ ಇಲ್ಲವೊ ಎಂಬುದು ಮುಖ್ಯವಾಗುವುದಕ್ಕಿಂತ ಹೆಚ್ಚಾಗಿ ತನ್ನ ನಿರ್ಧಾರ ಗೆಲ್ಲ ಬೇಕು ಅನ್ನೋ ಹಠ ಮನವನ್ನು ಆವರಿಸಿ ಬಿಡುತ್ತದೆ.

ಬ್ಲಾಗಿಗೆ ಬಂದು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು, ಭೇಟಿ ನಿರಂತರವಾಗಿರಲಿ.

------------------------------------------------------------------------------------------------
ಪ್ರೀತಿಯ ಪ್ರೀತಿಯಿಂದ ವೀಣಾ,

ಬಿಟ್ಟು ಹೋದ ಸಂಗಾತಿಯ ಕುರಿತು ಒಬ್ಬ ಒಂದು ಸಾಲನ್ನು ಬರೆಯುತ್ತಾನೆ.
"ನೀನು ನನ್ನನ್ನು ಬಿಟ್ಟು ಹೋಗಿ ನನ್ನೀ ಹೃದಯ ಛಿದ್ರವಾಗಿಸಿದೆ ಎನ್ನಲಾರೆ, ಛಿದ್ರವಾದ ಹೃದಯವಿಟ್ಟು ಕೊಂಡು ಬದುಕುವುದ ಕಲಿಸಿದೆ ಅದಕ್ಕೆ ನಾನು ನಿನಗೆ ಋಣಿ", ಅದೆಷ್ಟೊಂದು ಅರ್ಥ ಪೂರ್ಣವೆನಿಸುತ್ತಲ್ವ ಈ ಸಾಲುಗಳು.

ಬರಹ ಇಷ್ಟಪಟ್ಟಿದ್ದಕ್ಕೆ, ಮತ್ತು ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು, ತಪ್ಪಿಸದೇ ಬರ್ತಾ ಇರಿ.

------------------------------------------------------------------------------------------------
ಶಿವೂ ಸರ್,

ಅಕ್ಕರೆಯ ಅಭಿಪ್ರಾಯಕ್ಕೆ ಧನ್ಯವಾದಗಳು.
ನೀವು ಹೇಳಿದ್ದು ಸಾವಿರ ಪಾಲು ನಿಜ. ಸಮರ್ಥನೆ ಅದರಲ್ಲೂ ಇಂತಹ ವಿಚಾರದಲ್ಲಿ ಬಲು ಕಷ್ಟ.

------------------------------------------------------------------------------------------------
ಗುರುಮೂರ್ತಿ ಹೆಗ್ಡೆ (ಸಾಗರದಾಚೆಯ ಇಂಚರ) ಸರ್,

ನಿಮ್ಮ ಸಂತಸಕ್ಕೆ ಇಲ್ಲೂ ಈಗ ಒಂದು ತೃಪ್ತಿಯ ನಗು, ಹೀಗೆ ಬರ್ತಾ ಇರ್ತೀರಿ ಅಲ್ವ.

------------------------------------------------------------------------------------------------

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ನಲ್ಮೆಯ ಶ್ರುತಿ,

ಬದುಕಿನ ಅನಿವಾರ್ಯತೆಯ ಎದುರು ನೋವು ಏನು ಅಲ್ಲ ಅಂತ ಅನ್ನಿಸಿ ಬಿಡುತ್ತೆ ಅಲ್ವ, ಏನು ಮಾಡಲು ಸಾಧ್ಯವಿಲ್ಲ ಎಂದೆನಿಸಿ ಬಿಡುವ ಬದುಕ ಘಟ್ಟವದು.

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

------------------------------------------------------------------------------------------------
ದಿವ್ಯ,

ಹೊಗಳಿಕೆ ತುಂಬಾ ಜಾಸ್ತಿಯಾಯ್ತು ಅನ್ಸುತ್ತೆ :)
ನಿಮ್ಮ ಪ್ರೀತಿ ಪೂರ್ವಕ ಪ್ರೋತ್ಸಾಹ ಹೀಗೆ ಇದ್ದರೆ ಬರೆಯೋದು ತೀರ ಕಷ್ಟವೇನು ಅಲ್ಲ ಬಿಡಿ.

------------------------------------------------------------------------------------------------
ಮಲ್ಲಿಕಾರ್ಜುನ್ ಸರ್,

ಬದುಕಿನ ಅನಿವಾರ್ಯತೆ ನಮ್ಮನ್ನು ವೈರುಧ್ಯದೆಡೆಗೆ ಸೆಳೆದೊಯ್ಯುತ್ತದೆ ಅಲ್ವ. ಪರಿಸ್ಥಿತಿಯ ಕೈಗೊಂಬೆಗಳೆಲ್ಲರು. ಇಷ್ಟೊಂದು ಇಷ್ಟವಾಯ್ತಾ... ನನಗಂತೂ ಇಲ್ಲಿ ಮನಸ್ಸೆಲ್ಲ ಖುಷಿ ಖುಷಿ. ತಪ್ಪಿಸದೇ ಬರ್ತಾ ಇರಿ.

------------------------------------------------------------------------------------------------
ಮನಸು,

ಬ್ಲಾಗಿಗೆ ಆದರದ ಸ್ವಾಗತ, ಮತ್ತು ನಲ್ಮೆಯ ಹಾರೈಕೆಗೆ ಧನ್ಯವಾದಗಳು.

------------------------------------------------------------------------------------------------
ಗೆಳೆಯ ಜ್ಞಾನಮೂರ್ತಿ,

ಧನ್ಯವಾದಗಳು ಅಕ್ಕರೆಯ ಪ್ರತಿಕ್ರಿಯೆಗೆ...

------------------------------------------------------------------------------------------------
ನಲ್ಮೆಯ ಗುರು,

ನೀವೆಲ್ಲ ಹೀಗೆ ಪ್ರೋತ್ಸಾಹಿಸುತ್ತಿದ್ದಾರೆ ಖಂಡಿತಾ ಬರೆಯುತ್ತಿರುತ್ತೇನೆ.

------------------------------------------------------------------------------------------------
ಹೇಮಾ,

ಚಿಂತೆಗೆ ಹಚ್ಚಿದ್ದೀರಿ, ಇಲ್ಲಿ ಉತ್ತರವಾಗಿ ಬೇರೆಯ ಹೊರಟಿದ್ದರಿಂದಲೋ ಏನೋ, ಕಂಡು ಕಾಣದ ಒಂದು ಚೌಕಟ್ಟು ಬರಹಕ್ಕಿತ್ತು. ನೇರ ವಿಮರ್ಶೆಗೆ ತುಂಬ ತುಂಬ ಧನ್ಯವಾದ, ಸರಿಪಡಿಸಿಕೊಳ್ಳುವೆ.

------------------------------------------------------------------------------------------------
ಪ್ರಭು,

ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ.
ಬದುಕು ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುವದರಿಂದ ಆಪ್ಯಾಯಮಾನವೆನಿಸುತ್ತದೆ. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು, ಬ್ಲಾಗ್ ಭೇಟಿ ನಿರಂತರವಾಗಿರಲಿ.

------------------------------------------------------------------------------------------------
ಜ್ಯೋತಿ,

ತುಂಬಾ ತುಂಬಾ ಧನ್ಯವಾದಗಳು....

------------------------------------------------------------------------------------------------
ಶಾಂತಲಕ್ಕ,

ಸಿಕ್ಕಾಪಟ್ಟೆ ಹೊಗಳಿದ್ದೀರಿ. ನಿಮ್ಮ ಪ್ರೀತಿಗೆ ಆಭಾರಿ.

------------------------------------------------------------------------------------------------
ನೀಲಿ ಹೂವಿನ ಮಾಲೀ(ಕ) ರಂಜಿತ್,

ಸರ್ ಸ್ವಲ್ಪ ಹೌದು ಎನ್ನಬಹುದೇನೋ ನಿಮ್ಮ ಅಭಿಪ್ರಾಯಕ್ಕೆ.
ನಿಮ್ಮ ಅಭಿಲಾಷೆಯಂತೆ ನನ್ನ ಪ್ರಯತ್ನ ಮುಂದುವರೆಯುತ್ತಿರುತ್ತದೆ, ಪ್ರೋತ್ಸಾಹಿಸಲು ನೀವು ಬರುತ್ತಿರಬೇಕಷ್ಟೇ.
------------------------------------------------------------------------------------------------
ವಿನುತಾ,

ಅನಂತಾನಂತಾ ಧನ್ಯವಾದಗಳು, ಬರುತ್ತಿರಿ.

------------------------------------------------------------------------------------------------
ಏಕಾಂತ,

ನೀವು ಹೀಗೆ ಬರುವುದಾದರೆ ಬರಹವಾಗುತ್ತಿರಲೇನು ಅಡ್ಡಿಯಿಲ್ಲ. ಇಷ್ಟ ಪಟ್ಟು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯ. ಸದಾ ಬರುತ್ತಿರಿ.

------------------------------------------------------------------------------------------------
ಪೂಜಿತಾ,

ಅಕ್ಕರೆಯ ನುಡಿಗಳಿಗೆ ಮನದಾಳದ ಧನ್ಯವಾದ. ನನ್ನ ಬ್ಲಾಗಿಗೆ ಸ್ವಾಗತ, ಬ್ಲಾಗಿನ ದಾರಿ ಮರೆಯದೆ ಬರುತ್ತಿರಿ, ಅದೇ ನನಗೆ ಬರೆಯಲು ಒಂದು ಶಕ್ತಿ.

------------------------------------------------------------------------------------------------
ತಿಲಕ್ ರಾಜ್ ಸರ್,

ನನ್ನ ಬ್ಲಾಗಿಗೆ ಸ್ವಾಗತ, ಮತ್ತು ತುಂಬಾನೆ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ. ಹೀಗೆ ಬರುತ್ತಿರಿ.

------------------------------------------------------------------------------------------------

Roopa ಹೇಳಿದರು...

ರಾಜೇಶ್‌ರವರೆ
ನಿಮ್ಮ ಪತ್ರ ಓದುತ್ತಿದ್ದಂತೆ ಅರಿವಿಲ್ಲದೆ ಕಣ್ಣಲ್ಲಿ ನೀರು ಬಂತು. ಎಲ್ಲೋ ಹಿಂದಿನ ನೆನಪಾಗಿರಬೇಕು
ನಿಮ್ಮ ಬ್ಲಾಗ್‌ಗೆ ಬಂದ ಮೊದಲ ದಿನವೇ ಅಳಿಸಿಬಿಟ್ಟಿರಲ್ಲ :)
ತಮಾಷೆಗೆ.
ಹೆಣ್ಣಾಗದೆ ಹೆಣ್ಣಿನೆದೆಯ ಪರಕಾಯ ಪ್ರವೇಶ ಮಾಡಿ ಅವಳೆದೆಯ ದುಗುಡವನ್ನು ಕಲ್ಲೆದೆ ಕರಗುವಂತೆ ವಿವರಿಸಿದ್ದೀರಾ
ಚೆನ್ನಾಗಿದೆ

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ರೂಪ ಮೇಡಂ,

ನನ್ನ ಬ್ಲಾಗಿಗೆ ನಿಮಗೆ ಭವ್ಯ ಸ್ವಾಗತ, ಕಣ್ಣೀರಾಗಿಸಿದ್ದಕ್ಕೆ ಕ್ಷಮೆ ಇರಲಿ, ಚುಚ್ಚುವ ನೆನಪುಗಳಿಂದ ದೂರವಿರಬೇಕಂತೆ.
ಮೆಚ್ಚುಗೆಗೆ ಕೋಟಿ ಕೋಟಿ ಧನ್ಯವಾದಗಳು, ಹೀಗೆ ಬರುತ್ತಿರಿ.