ಭಾನುವಾರ, ಫೆಬ್ರವರಿ 22, 2009

ಮ(ಇ)ಳೆ


ಅಂಗಳದ ಪ್ರಾಂಗಣದಿ ಮಳೆ ಹನಿಯ ಸದ್ದು
ವರುಣನಿಗೋ ವಸುಂಧರೆಯ ಪ್ರೀತಿ ಮುದ್ದು
ಮೋಡಗಳ ನಡುವಿನಲಿ ರವಿ-ಚಂದ್ರರಿದ್ದು
ನೋಡುತಿಹರು ಇವರ ಪ್ರೇಮ-ಸಲ್ಲಾಪವ ಕದ್ದು ಕದ್ದು

ಕಳೆದು ಹೋಗುತಿಹ ಪ್ರಿಯತಮಗೆ ತಡೆಯೊಡ್ಡಲೆಂದು
ಮೇಘವರ್ಷಿಣಿ ಅಬ್ಬರಿಸಿ ಗುಡುಗುತಿಹಳು!!!
ಬೆದರಿ ಓಡುತಿಹ ಅವಳನ್ನು ತಡೆಯಲೆಂಬಂತೆ
ಅಡ್ಡಗಟ್ಟಲು ನಿಂತಿಹರು ಶಿಖರದ್ವಯರು!!!

ಭುವಿಯ ಮಡಿಲ ತುಂಬುವ ಮುನ್ನ ತನಗಿಷ್ಟು ಇರಲೆಂದು
ಹಸಿರೆಲೆಯ ಚಾಚಿ ನಿಂತಿಹಳು ವನದೇವಿ ಈಗ...
ಎಲ್ಲ ಭೇದಿಸಿ ನುಗ್ಗಿ ಇಳೆಯ ಸೇರುವ ತೆರದಿ
ಮುನ್ನುಗ್ಗಿ ಬರುತಿಹನು ಮಳೆರಾಯನೀಗ...

ನಾಚಿ ನೀರಾಗಿಹಳು ಧರಿತ್ರಿಯಿಂದು
ಹಸೆಮಣೆಯನೇರಿ ಕುಳಿತಿಹ ನೀರೆಯಂತೆ!!!
ತವಕಿಸುತ್ತಿಹಳೀಗ ಸೆರೆ ಹಿಡಿದು ಕೊಳ್ಳಲು
ತನ್ನಿನಿಯನನ್ನು ಇನ್ನೆಂದು ಬಿಟ್ಟು ಹೋಗದಂತೆ!!!

(ಶಾಂತಲಕ್ಕನವರ ಮಳೆ ಚಿತ್ರದ ಸ್ಪೂರ್ತಿಯಿಂದ ಬರೆದ ಕವನ...)

13 ಕಾಮೆಂಟ್‌ಗಳು:

Ittigecement ಹೇಳಿದರು...

ರಾಜೇಶ್...

ನಿಮ್ಮ ಬ್ಲಾಗಿನಲ್ಲಿ ಯಾವಗಲೂ ಹೊಸತೊಂದು ಇರುತ್ತದೆ...

ಪ್ರೀತಿಯ ಭಾವನೆಗಳ..
ತಾಕಲಾಟ.. ದುಗುಡ ..ದುಮ್ಮಾನ..
ಬಹಳ ಚಂದವಾಗಿ ಬಣ್ಣಿತವಾಗಿದೆ...
ಶಬ್ಧಗಳ ಹಿಡಿತ,..
ಭಾವನೆಗಳು ಹ್ರದಯ ತಟ್ಟುವಂತಿದೆ..

ಚಂದದ ಕವನಕ್ಕೆ ..
ಅಭಿನಂದನೆಗಳು..

ರಾಜೇಶ್..

shivu.k ಹೇಳಿದರು...

ರಾಜೇಶ್,

ಕವನ ತುಂಬಾ ಚೆನ್ನಾಗಿದೆ...ಮಳೆ, ಮೋಡ, ವಸುಂಧರೆ, ಶಿಖರ, ಎಲ್ಲಾ ಚೆನ್ನಾಗಿ ಬಳಸಿದ್ದೀರಿ....

ನಾಚಿ ನೀರಾಗಿಹಳು ಧರಿತ್ರಿಯಿಂದು
ಹಸೆಮಣೆಯನೇರಿ ಕುಳಿತಿಹ ನೀರೆಯಂತೆ!!! ಇಂಥ ಪ್ರಯೋಗಗಳು ನನಗೆ ಇಷ್ಟವಾಗುತ್ತವೆ...ಹೀಗೆ ಬರೆಯುತ್ತಿರಿ...

ಅನಾಮಧೇಯ ಹೇಳಿದರು...

ಮಳೆಗಾಲದ ದ್ರಷವನ್ನು ಕಣ್ಣು ಮುಂದೆ ಕಟ್ಟಿದಂತಿತ್ತು, ಪ್ರಕೃತಿಯನ್ನು ಸಬಂದದಲ್ಲಿ ಬೇಸದದ್ದು ಚೆನ್ನಾಗಿ ಇದೆ.

ಚಿತ್ರಾ ಸಂತೋಷ್ ಹೇಳಿದರು...

ಮಳೆ ಅನ್ನೊದೇ ಚೆಂದ....ನೀ ಮಳೆಯನ್ನು ವರ್ಣಿಸಿರುವ ರೀತಿ ಇನ್ನೂ ಚೆನ್ನ. ಒಂದು ಕ್ಷಣ ವಸುಂಧರೆಯನ್ನು ನಾಚಿ ನೀರಾಗಿಸಿದ ಮಳೆಯಲ್ಲಿ ತೊಯ್ದ ಹಾಗಾಯಿತು. ಚೆಂದದ ಕವನಕ್ಕೆ ನನ್ನ ಕಡೆಯಿಂದ ಪ್ರೀತಿಯ ಅಭಿನಂದನೆಗಳು ರಾಜೇಶ್. ಇನ್ನಷ್ಟು ಬರೆಯಿರಿ..ಶುಭಹಾರೈಕೆಗಳು.
-ಚಿತ್ರಾ

ಅನಾಮಧೇಯ ಹೇಳಿದರು...

ಬರಲಿರುವ ಬೇಸಿಗೆ ನೆನೆದು ಉಸ್ಸಪ್ಪಾ ಅನ್ನುವಾಗ ತಣ್ಣಗಿದೆ ಈ ಮಳೆ ಕವನ!
- ಅಕ್ಕ

ಜ್ಞಾನಮೂರ್ತಿ ಹೇಳಿದರು...

ಗೆಳೆಯ ರಾಜೇಶ್,

ಮಳೆಯ ಕವನ ತುಂಬಾ ಚೆನ್ನಾಗಿದೆ.

ಮಳೆ ಕಂಡರೆ ನನಗೆ ಭಯ, ಭಯ ಏನೇ ಇರಲಿ, ಮಳೆ ತರುವ ಸಂಭ್ರಮಕ್ಕೆ, ಅದರ ಸೊಬಗಿಗೆ, ಅನುಭೂತಿಗೆ ಮಳೆಯೊ೦ದೆ ಸಾಕ್ಷಿ.......

ಅನಾಮಧೇಯ ಹೇಳಿದರು...

ಹೊರಗೆ ನಿಜವಾಗಲೂ ಮಳೆ ಬರುತ್ತಿರಬೇಕು...ಅಂತ ಕಾಣುತ್ತದೆ...:)... ವರುಷದ ಮೊದಲ ಮಳೆಯಶ್ಟೆ ಚೆಂದವಾಗಿದೆ ರಾಜೇಶ್.....

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ರಾಜೇಶ !
ಬಯಲು ಸೀಮೆಯ ನಮಗೆ ಮಳೆಯ ಸೊಬಗು ಅನುಭವಿಸಲು ಸಿಗುವದು ಬಹಳ ವಿರಳ,
ಸಿಕ್ಕರೂ ರಭಸದಿಂದ ಕೂಡಿದ ಬಿರುಗಾಳಿ ಮಿಶ್ರಿತ ಬಿರುಹನಿಗಳ ಹೊಡೆತ ಜಾಸ್ತಿ ಇರುತ್ತದೆ.
ಅದಕ್ಕೆ ನಮಗೆ ಮಳೆ ಅಂದರೆ ಭಯ. ಅದರಲ್ಲೂ ವರ್ಷದ ಮೊದಲ ಮಳೆ ಗುಡುಗು ,ಮಿಂಚು
ಮತ್ತು ಆಲಿಕಲ್ಲುಗಳ ಮಿಶ್ರಣವಾಗಿರುತ್ತದೆ ಬಯಲಲ್ಲಿ ಮಳೆಗೆ ಸಿಕ್ಕರೆ ಆ ಮನುಷ್ಯನಿಗೆ ದೇವರೆ ಗತಿ.

ಆದರೆ ಮಲೆನಾಡಿನ ನಿಮಗೆ ಮಳೆಯು ಜೀವನದ ಒಂದು ಭಾಗವಾಗಿ, ಭಾವನೆಗಳಿಗೆ ಒಂದು ಸೆಲೆಯಾಗಿ ,ಕವನಗಳಿಗೆ ಸ್ಪೂರ್ತಿಯಾಗುತ್ತದೆ ಅಲ್ವಾ?

ಕವನ ತುಂಬಾ ಚೆನ್ನಾಗಿದೆ ರಾಜೇಶ ….
ಯಾವಾಗಲೂ ತಾರ್ಕಿಕವಾಗಿ ಚಿಂತಿಸುವ ನನಗೆ ಭಾವನಾ ಪ್ರಪಂಚದ ಸುಮಧುರ ಲೋಕಕ್ಕೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು..

ಎಂದೂ ಬರೆಯದ (ಶಾಲೆಯಲ್ಲಿ ಕೂಡ ಬರೆದಿಲ್ಲ) ಪರೀಕ್ಷೆಗಳಲ್ಲಿ ಮಾತ್ರ ಬರೆವ ನಾನು ನೀನ್ನ ಬ್ಲಾಗ ನಿಂದಾಗಿ ಬರೆಯಲು ಪ್ರಯತ್ನಿಸುತ್ತಿದ್ದೆನೆ. (ನೆನಪು ಪ್ರತಿಕ್ರಿಯೆ)
ಬರಹದ ನೀರಿಕ್ಷೆಯಲ್ಲಿ……….
ಲಕ್ಷ್ಮಣ

Sunil Mallenahalli ಹೇಳಿದರು...

Rajesh Avare..nimma kavana bahala sogaasagide.

"ಮೋಡಗಳ ನಡುವಿನಲಿ ರವಿ-ಚಂದ್ರರಿದ್ದು
ನೋಡುತಿಹರು ಇವರ ಪ್ರೇಮ-ಸಲ್ಲಾಪವ ಕದ್ದು ಕದ್ದು"
e saalugalu nanage tumbaa ishtvaadavu..

Sunil

ಅನಾಮಧೇಯ ಹೇಳಿದರು...

ನಮಸ್ತೆ ರಾಜೇಶ್
ಏನ್ರೀ ಇದು ಎಷ್ಟು ಓದಿದರು ಸಾಕಾಗ್ತಾ ಇಲ್ಲ. ಇನ್ನೂ ಏನು ಬರೆಯಲಿ ಹೇಳಿ.
ವರುಣ ಹಾಗೂ ವಸುದರೆಯ ಪ್ರೇಮ ಪ್ರಕರಣನ ವೈವಿಧ್ಯಮಯವಾಗಿ ನಿರೂಪಿಸಿದ್ದೀರ.
ಇವರ ಪ್ರೇಮ-ಸಲ್ಲಾಪವನ್ನು ಮೋಡಗಳ ಮರೆಯಲ್ಲಿ ನಿಂತು ನೋಡುವ ರವಿ ಚಂದ್ರರು.
ತನ್ನನ್ನ ಬಿಟ್ಟು ವಸುಧರೆಯ ಬಳಿ ಹೋಗುತ್ತಾನೆ ಅನ್ನೋ ಹೊಟ್ಟೆ ಕಿಚ್ಚಿನಿಂದ ಗುಡುಗುತ್ತಿರುವ ಮೇಘವರ್ಷಿಣಿ.
ಗುಡುಗುತ್ತಿರುವ ಮೇಘವರ್ಷಿಣಿಯನ್ನು ತಡೆಯಲು ಶಿಖರದ್ವಯರ ಕಾವಲು.
ಈ ವರುಣನು ವಸುದರೆಯ ಮಡಿಲ ಮುಟ್ಟುವ ಮೊದಲು ಆತನ ಪ್ರೀತಿ ನನಗೂ ಸ್ವಲ್ಪ ಸಿಗಲಿ ಎಂದು ಹಸಿರೆಲೆಯ ಚಾಚಿ ನಿಂತಿರುವ ವನದೇವಿ.
ಇವರೆಲ್ಲರನ್ನು ತಪ್ಪಿಸಿ ಇವರಿಗೆಲ್ಲ ಸಮಾಧಾನ ಪಡಿಸಿ ವಸುದರೆಯ ಬಳಿ ಬಂದಾಗ ವಸುದರೆ ನಾಚಿ ಕೊಂದ ರೀತಿ ತನ್ನನ್ನು ಬಿಟ್ಟು ಹೋಗದಂತೆ ಬಂದಿಸಿದ ರೀತಿ ಇವೆಲ್ಲವನ್ನೂ ನೀವು ನಿಮ್ಮ ಕವನದಲ್ಲಿ ಬಂದಿಸಿದ ರೀತಿ ಎಲ್ಲವೂ ನನಗೆ ಸಣ್ಣವಳಿರುವಾಗ ಈ ವರುಣನ ಪ್ರೀತಿಯಲ್ಲಿ ಪಾಲು ತೆಗೆದು ಕೊಂಡಿದ್ದನ್ನ ನೆನಪಿಸಿತು. ಧನ್ಯವಾದಗಳು ರಾಜೇಶ್ ಅಧ್ಬುತ ಬರಹ ಯಾವಾಗಲೂ ನಗು ನಗುತ್ತಾ ಇರಿ

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ರಾಜೇಶ್ ಅವರೆ...
ತುಂಬ ಚೆನ್ನಾಗಿ ಸಾಲುಗಳ ಹೆಣೆದಿದ್ದೀರಿ. ಎಲ್ಲ ಸಾಲುಗಳೂ ಇಷ್ಟವಾದವು.
ಆವತ್ತಿನ ಮಳೆಯ ವಿಡಿಯೋ ನೋಡಿದ್ದರಿಂದ ಪ್ರಭಾವಿತರಾಗಿ ಇಷ್ಟು ಸುಂದರ ಸಾಲುಗಳನ್ನು ರಚಿಸಿದ್ದೀರಿ, ಆವತ್ತಿನ ಮಳೆಯನ್ನು ನೀವು ಖಂಡಿತ ನೋಡಬೇಕಿತ್ತು.
ನೀವು ಆ ವಿಡಿಯೋವನ್ನು ಇಷ್ಟಪಟ್ಟಿದ್ದು ತುಂಬ ಖುಷಿಯಾಗಿದೆ, ನಾನು ಅದನ್ನು ಬ್ಲಾಗಲ್ಲಿ ಹಾಕಿದ್ದು ಸಾರ್ಥಕವಾಯಿತು. ಅನಂತ ಧನ್ಯವಾದಗಳು ನಿಮಗೆ, ಚಂದದ ಕವಿತೆಗೂ ಸಹ.

ranjith ಹೇಳಿದರು...

ಬಹುಶಃ ನೀವು ಬರೆದಿದ್ದರಲ್ಲೇ ಬೆಸ್ಟ್ ಇದು..:)

-ರಂಜಿತ್

ಅನಾಮಧೇಯ ಹೇಳಿದರು...

chennagide... padagaLu, praasa miLitavaada maduravaada kavana