ಮಂಗಳವಾರ, ಏಪ್ರಿಲ್ 7, 2009

ಕೊನೆಗೂ ಶಾಂಭವಿ ಮೇಡಂಗೆ ಹುಡುಗ ಗೊತ್ತಾಯ್ತು!!!

"ಪ್ರಭು, ಶಾಂಭವಿ ಮೇಡಂಗೆ ಗಂಡು ಸಿಕ್ಕಾಯ್ತು, ನೆನ್ನೆ ರಾತ್ರಿಯೇ ನಿಮಗೆ ಫೋನ್ ಮಾಡ್ಬೇಕು ಅಂತ ಅಂದ್ಕೊಂಡಿದ್ದೆ, ಒಳ್ಳೆಯದಾಯ್ತಲ್ವ, ನಂಗೆ ಖುಷಿಯಾಯ್ತು."

"ಹೌದು ಮುಕುಂದ್ ನಂಗು ಗೊತ್ತಾಯ್ತು ನಮ್ಮ ಅತ್ತಿಗೆ ಹೇಳಿದ್ರು, ಕೊನೆಗೂ ಗಂಡು ಸಿಕ್ತಲ್ಲ ಸದ್ಯ, ಮ್ಯಾಟ್ರಿಮೋನಿಯಲ್ ನಲ್ಲಿ ನೊಂದಾಯಿಸಿಕೊಂಡಿದ್ದು ಎಷ್ಟು ಒಳ್ಳೆದಾಯ್ತಲ್ವ ಅವರಿಗೆ, ಹುಡುಗಾನು ಒಳ್ಳೆಯವನು ಅನ್ಸುತ್ತೆ. ಏನೋ ಬಿಡಿ ಸದ್ಯ ಈಗ ಸ್ವಲ್ಪ ಮನಸ್ಸಿಗೆ ಖುಷಿಯಾಯ್ತು."

ನಾನವತ್ತು ಕಚೇರಿಗೆ ಹತ್ತು ನಿಮಿಷ ತಡ, ನನ್ನ ಎಡ-ಬಲದಲ್ಲಿ ಕುಳಿತು ಕೊಳ್ಳುವ ಸಹೋದ್ಯೋಗಿಗಳ ನಡುವೆ ಪುಂಖಾನುಪುಂಖವಾಗಿ ಹೀಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಇವರಿಬ್ಬರು ಒಂದೇ ಊರಿನವರಲ್ಲ, ತೀರ ಹಳೆ ಪರಿಚಯದವರು ಅಲ್ಲ, ಸರಿ ಸುಮಾರು ಒಂದು ವರ್ಷದಿಂದ ಒಂದೇ ಸೂರಿನಡಿ ಕೆಲಸ ಮಾಡುತ್ತಿರುವುದರಿಂದ ಸ್ವಲ್ಪ ಜಾಸ್ತಿಯೆನ್ನುವಷ್ಟು ಆತ್ಮೀಯ ಗೆಳೆಯರು. ಇದೆಲ್ಲ ಯಾಕೆ ಹೇಳುತ್ತಿದ್ದೀನೆಂದು ಯೋಚಿಸುವಿರ, ಕಾರಣ ಇಷ್ಟೇ ಇವರಿಬ್ಬರು ಗೆಳೆತನದಲ್ಲಿ ಎಷ್ಟು ಹಳಬರೋ ಇವರಿಬ್ಬರ ಜೊತೆ ನನ್ನ ಗೆಳೆತನವು ಅಷ್ಟೆ ಹಳತು. ಆದರೆ ಶಾಂಭವಿ ಮೇಡಂ ಯಾರು? ಎಂಬುದು ನನ್ನ ಪಾಲಿಗೆ ಒಂದು ಯಕ್ಷ ಪ್ರಶ್ನೆಯಂತಾಗಿತ್ತು. ಇಬ್ಬರ ಮುಖದಲ್ಲೂ ಅದೆಂತಹುದೋ ಸಮಾಧಾನ, ತಮ್ಮ ಮನೆಯ ಮಗಳಿಗೆ ಕಷ್ಟ ಪಟ್ಟು ಹುಡುಗನ ಹುಡುಕಿ ಇನ್ನೇನು ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ತರಾತುರಿಯಲ್ಲಿ ನನ್ನ ಇಬ್ಬರು ಸಹೋದ್ಯೋಗಿಗಳಿದ್ದಂತೆ ಕಂಡರು.

ನಾನು ಕುತೂಹಲ ತಡೆಯಲಾಗದೆ ಕೇಳಿದೆ "ಮುಕುಂದ ಯಾರು ಶಾಂಭವಿ ಮೇಡಂ", ಮುಕುಂದ ಕೂಡಲೇ "ಪ್ರಭು, ಇವನಿಗೆ ಶಾಂಭವಿ ಮೇಡಂ ಗೊತ್ತಿಲ್ಲ ನೋಡು" ಅಂದ. ನನಗೀಗ ಇನ್ನು ಕುತೂಹಲ ಹೆಚ್ಚಾಯಿತು ಪ್ರಭುವಿನ ಕಡೆ ತಿರುಗಿ ಕೇಳಿದೆ "ಯಾರೋ ಶಾಂಭವಿ ಮೇಡಂ". ಪ್ರಭು ಮಾತಿಗೆ ಶುರುವಿಟ್ಟ "ರಾಜು ಶಾಂಭವಿ ಮೇಡಂ ಗೊತ್ತಿಲ್ಲ ಅಂದ್ರೆ ಹೇಗೋ, ಎಷ್ಟು ಸಮಯದಿಂದ ಹುಡುಗನನ್ನು ಹುಡುಕುತ್ತಿದ್ದರು ಗೊತ್ತ, ಎಲ್ಲಿ ಜನ ಮಾರಾಯ ನೀನು, ಮುಕುಂದ ಇವನಿಗೆ ಏನು ಹೇಳೋದೋ?" ಅಂದ.

ನನ್ನ ಸಹನೆ ಮೀರಿತ್ತು "ಹೇಳೋ ಇಷ್ಟ ಇದ್ದರೆ ಹೇಳಿ, ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ" ಅಂದೆ. ಮುಕುಂದ ಕೂಡಲೇ ಕೇಳಿದ "ರಾತ್ರಿ :೩೦ ಕ್ಕೆ - ಟಿ. ವಿ ಯಲ್ಲಿ 'ಮುಕ್ತ ಮುಕ್ತ' ಧಾರವಾಹಿ ನೋಡಲ್ವೇನೋ?". ಒಂದು ಕಡೆ ನಗು ಇನ್ನೊಂದು ಕಡೆ ಸಿಟ್ಟು ಒತ್ತರಿಸಿ ಬಂದಿದ್ದು ಸುಳ್ಳಲ್ಲ. "ಶಾಂಭವಿ ಮೇಡಂ" ಮುಕ್ತ-ಮುಕ್ತ ಧಾರಾವಾಹಿಯ ಒಂದು ಪಾತ್ರವಂತೆ.

ಧಾರಾವಾಹಿಗಳು ಮತ್ತು ಧಾರಾವಾಹಿಯ ಪಾತ್ರಗಳು ನಮ್ಮ ನಡುವಲ್ಲೇ ನಡೆವ ಸನ್ನಿವೇಶಗಳು ಮತ್ತು ನಮ್ಮ ಮನೆಯ ಅವಿಭಾಜ್ಯ ಅಂಗಗಳೇನೋ ಎಂಬಂತೆ ಆಗಿ ಹೋಗಿದೆ, ನೋಡುವ ಪ್ರತಿಯೊಬ್ಬರೂ ಇದರಲ್ಲಿ ಅದೆಷ್ಟು ತಲ್ಲೀನರು ಅಂದರೆ ಒಂದು ದಿನವು ತಪ್ಪಿಸದೇ ನೋಡುತ್ತಾರೆ, ಅಕಸ್ಮಾತ್ ತಪ್ಪಿದರೆ ಏನೋ ಕಳೆದು ಕೊಂಡ ಅನುಭವ.

ಆಗ ನಾನು ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ, ಎಂದಿನಂತೆ ಮಧ್ಯಾನ್ಹ ಕಾಲೇಜು ಮುಗಿಸಿ ಮನೆಗೆ ಬಂದು ಬಾಗಿಲು ತಟ್ಟಿದವನಿಗೆ ಬಾಗಿಲು ತೆರೆದು ಎದುರಾಗಿದ್ದು ನನ್ನ ಅಜ್ಜಿ, ಪ್ರತಿ ದಿನ ಕಾಲೇಜಿನಿಂದ ಬಂದವನಿಗೆ ಊಟ ಮಾಡ್ತೀಯ ಅಂತ ಕೇಳಿ, ಊಟ ಬಡಿಸುತ್ತಿದ್ದ ಅಜ್ಜಿ ಅವತ್ತು ಎಂದಿನಂತಿರಲಿಲ್ಲ, ಒಂದೇ ಸಮನೆ ಅಳು, ಏನಾಯ್ತು ಅಂದರೆ ಕಾರಣ ಹೇಳಲು ಸಾಧ್ಯವಾಗದಷ್ಟು ಜೋರಾಗಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ನಾನು ದಿಕ್ಕೇ ತೋಚದಂತಾಗಿ ಕೇಳಿದೆ "ಏನಾಯ್ತು ಹೇಳಜ್ಜಿ". ಅಜ್ಜಿ ಅಳುತ್ತಲೇ ಶುರು ಮಾಡಿದರು "ಸುಮತಿಗೆ ಯಾರೋ ಚಾಕು ಹಾಕಿ ಬಿಟ್ಟರು, ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ, ಸಂಜೆ ಕ್ಕೆ ಬರ್ತಾರಲ್ಲ ಅದೇ ಡಾಕ್ಟ್ರು ಈಗಲೇ ಏನು ಹೇಳೋದಕ್ಕೆ ಆಗಲ್ಲ ಅಂದ್ರು, ಪಾಪಿ ಅವನಿಗೆ ಕೊಲೆ ಮಾಡ್ಲಿಕ್ಕೆ ಹುಡುಗೀನೆ ಬೇಕಿತ್ತಾ, ಅವಳು ಅದೆಷ್ಟು ನೊಂದಿದ್ದಾಳೆ ಈಗಾಗಲೇ" ನಾನು ಒಂದು ಕ್ಷಣ ಅವಕ್ಕಾದೆ, ಈಗ ಏನು ಮಾಡೋದು ಅಂತ ಯೋಚಿಸುವ ಮುನ್ನ ನೆನಪಾಗಿದ್ದೆಂದರೆ ಸುಮತಿ ಎಂಬ ಹೆಸರಿನವರು ನನಗೆ ತಿಳಿದ ಮಟ್ಟಿಗೆ ನಮ್ಮ ಕುಟುಂಬದಲ್ಲಿ ಅಥವಾ ನಮ್ಮ ಪರಿಚಯಸ್ಥರಲ್ಲಿ ಯಾರು ಇಲ್ಲ, ಕೊನೆಗೆ ಅಜ್ಜಿಗೆ ಮರು ಪ್ರಶ್ನೆ ಕೇಳಿದೆ ಅಂದ ಹಾಗೆ ಸುಮತಿ ಯಾರು?. ಈಗ ಅಜ್ಜಿಗೆ ಕೋಪ ಬಂದಿತ್ತು "ಬೇಕುಪ್ಪ ಸುಮತಿ ಗೊತ್ತಿಲ್ವ, :೩೦ ಕ್ಕೆ ಧಾರವಾಹಿ ಅವಳು", ಮತ್ತೆ ನನಗೆ ಮಾತೆ ಹೊರಡಲಿಲ್ಲ.

ಹೀಗೆ ಒಮ್ಮೆ ನಮ್ಮ ಅಮ್ಮನ ಪರಿಚಯದವರೊಬ್ಬರು ಮನೆಗೆ ಬಂದವರು ಅಮ್ಮನ ಬಳಿ ಮಾತನಾಡುತ್ತಾ "ಮಗನಿಗೆ ಎಲ್ಲೂ ಹುಡುಗಿ ಸಿಗಲಿಲ್ಲ, ಯಾರಾದರು ಬಡವರ ಮನೆ ಹೆಣ್ಣಾದರು ಪರವಾಗಿಲ್ಲ ಒಳ್ಳೆಯವಳಾಗಿದ್ದರೆ ಸಾಕು, ನಿಮಗೆ ಎಲ್ಲಾದರು ಗೊತ್ತಿದ್ದರೆ ಹೇಳಿ" ಅಂದರು. ಒಳಮನೆಯಿಂದ ಬಂದ ಅಜ್ಜಿ ಕೂಡಲೇ "ಸಂಜೆ :೩೦ ಕ್ಕೆ ಗುಪ್ತಗಾಮಿನಿಯಲ್ಲಿ ಬರ್ತಾಳಲ್ವ ಭಾವನ ಅವಳಿಗೂ ಹುಡುಗನ್ನ ನೋಡುತ್ತಿದ್ದಾರೆ, ನಂಗೆ ಚೆನ್ನಾಗಿ ಗೊತ್ತು ಅವಳು ತುಂಬಾ ಒಳ್ಳೆ ಹುಡುಗಿ ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ಳುವುದಾದರೆ ನೋಡಿ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಾಗ ಅಮ್ಮನಿಗೂ, ನನಗು, ಮತ್ತು ಬಂದವರಿಗೂ ನಗು ತಡೆಯಲಾಗಿರಲಿಲ್ಲ.

24 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಪಾರ್ವತಿ ಧಾರಾವಾಹಿ ಬರುತ್ತಿದ್ದ ಸಮಯದಲ್ಲಿ ಎಲ್ಲಿ ನೋಡಿದರೂ ಅವಳದ್ದೇ ಮಾತು!
ಅವಳು ಹಾಗೆ ಮಾಡಿದಳಂತೆ, ಹೀಗೆ ಮಾಡಿದಳಂತೆ ಅಂತ..
ಯಾಕೋ ಜನ ಮನೆಯವರು,ನೆಂಟರಿಗಿಂತ ಹೆಚ್ಚು ಧಾರವಾಹಿ ಪಾತ್ರಗಳನ್ನೇ ಹಚ್ಚಿಕೊಳ್ಳುತ್ತಿದ್ದಾರೆ ಅಂತ ಅನಿಸುತ್ತದೆ. ಯಾಕೋ ಗೊತ್ತಿಲ್ಲ!

ದಿವ್ಯಾ ಮಲ್ಯ ಕಾಮತ್ ಹೇಳಿದರು...

ರಾಜೇಶ್,
ನೀವು ಬರೆದಿದ್ದು ಅಕ್ಷರಶಃ ಸತ್ಯ ...ಇದು ಮನೆ ಮನೆಯ ಕಥೆ... ಆಫೀಸಿನ ಕತೆಯೂ ಅಂತ ಈಗ ತಿಳಿಯಿತು :) ತುಂಬಾ ವಿನೋದವಾಗಿ ಬರೆದಿದ್ದೀರಾ...ಅಭಿನಂದನೆಗಳು !

Ittigecement ಹೇಳಿದರು...

ರಾಜೇಶ್....

ಒಳ್ಳೆಯ ವಿಷಯವನ್ನೇ ಆರಿಸಿಕೊಂಡಿದ್ದೀರಿ...
ಈ ಮಾಧ್ಯಮಗಳಲ್ಲಿ (ಟಿವಿ)..
ಧಾರವಾಹಿಗಳಲ್ಲಿ ಯಾಕೆ ವಾಸ್ತವವನ್ನು ಚಿತ್ರಿಸಿ ಕೊಡುವದಿಲ್ಲ...
ನೋಡುವವರು ಮೂರ್ಖರೆ..?
ದಿನನಿತ್ಯ ನಡೆಯುವ ಸಹಜತೆಯನ್ನು ಯಾಕೆ ತೋರಿಸ ಬಾರದು...?
ಕೇವಲ ದೊಡ್ಡ ಮನೆ, ದುಬಾರಿ ಕಾರು, ಕ್ಲಬ್..
ಕೆಟ್ಟ ಅತ್ತೆ, ಮನೆಯಲ್ಲೊಂದು ಅಕ್ರಮ ಸಂಬಂಧ ..
ಇದೆಲ್ಲ ಯಾಕೆ ತೋರಿಸ ಬೇಕು...?

ನಮಗೆ ಬೇರೆ ಯಾವುದೇ ಆಯ್ಕೆ ಇಲ್ಲ...
ಇರುವವರಲ್ಲಿ ಟಿಎನ್,ಸೀತಾರಾಮ್, ಸೇತುರಾಮ್ ಓಕೆ....

ಧಾರವಾಹಿ ಬದುಕಿಗೆ ಹತ್ತಿರವೆಂದು ತಿಳಿಯುವದರಿಂದ..
ನೀವು ಹೇಳಿದ ರೀತಿ ಘಟನೆಗಳು ಆಗಿಬಿಡುತ್ತದೆ...

ಮುಗ್ಧ ಜನರ ಮೇಲೆ ಕೆಟ್ಟ ಧಾರವಾಹಿಗಳ ಪರಿಣಾಮ ....?

ಗಂಭೀರ ಚಿಂತನೆ..
ಹಾಸ್ಯದ ಲೇಪದೊಂದಿಗೆ...
ಇಷ್ಟವಾಯಿತು...

ಧನ್ಯವಾದಗಳು...

Ushasree ಹೇಳಿದರು...

now did u get who is shambhavi Madam.....?

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ಪ್ರೀತಿಯ ರಾಜೇಶ
ಬಹಳ ದಿನಗಳಿಂದ ಏನು ಬರೆಯುತ್ತಾನೆಂದು
ಕೂತೂಹಲದಿಂದ ಕಾಯುತ್ತಿದ್ದೆ,
ಬರಹ ಚೆನ್ನಾಗಿದೆ ಹಾಸ್ಯಮಿಶ್ರಿತ ವಿಡಂಬನಾತ್ಮಕ ಬರಹ.
ನಮ್ಮ ಜನ ವಾಸ್ತವದಲ್ಲಿ ಹೇಗಿರ್ತಾರೆ ಗೊತ್ತಿಲ್ಲ ಆದರೆ
ಧಾರಾವಾಹಿ ಪಾತ್ರಗಳಿಗೆ ಮಾತ್ರ ತುಂಬಾ ಸಹನಾಭೂತಿ ತೋರಿಸುತ್ತಾರೆ.
ಬಿಡುವಿದ್ದಾಗ ಅದೊಂದು ಅವರಿಗೆ ಮನರಂಜನೆ.
ಎಲ್ಲ ಘಟನೆಗಳು ನಮ್ಮ ಜೀವನದಲ್ಲಿ ಆಗುವದಿಲ್ಲ
ಧಾರಾವಾಹಿಗಳಿಂದ ಸಮಾಜದ ವಿವಿಧ ಸ್ತರಗಳ ಜನರ ವ್ಯಕ್ತಿತ್ವ
ಹಾಗೂ ವಿವಿಧ ಸನ್ನಿವೇಶಗಳ ಪರಿಚಯವಾಗುತ್ತದೆ.
ಎಲ್ಲದರಿಂದಲೂ ಲಾಭ ನಷ್ಟ ಇದ್ದೇ ಇರುತ್ತದೆ ಆದರೆ
ಅದನ್ನ ನಾವು ಹೇಗೆ ತೆಗೆದುಕೋಳ್ಳುತ್ತೆವೆ ಅನ್ನುವದನ್ನ
ಅವಲಂಬಿಸಿರುತ್ತದೆ.
(ಸಕಾರತ್ಮವಾಗಿ ತೆಗೆದುಕೋಂಡ್ರೆ ಎಲ್ಲದೂ ಓಳ್ಳೆಯದೆ).

“ ಹೋಟೆಲಿನಲ್ಲಿ ಮನೆ ರುಚಿ,
ಮನೆಯಲ್ಲಿ ಹೋಟೆಲಿನ ರುಚಿ
ಬಯಸುವ ಮನಸ್ಥಿತಿ ನಮ್ಮದು”

ಬರಿತಾ ಇರು……………….
ಲಕ್ಷ್ಮಣ

ಅನಾಮಧೇಯ ಹೇಳಿದರು...

:D

krishnamurthy Prabhu ಹೇಳಿದರು...

ಅಭಿನಂದನೆಗಳು ಕೊನೆಗೂ ಶಾಂಭವಿ ಮೇಡಮ್ ಗೆ ಮದುವೆ....
ತುಂಬಾ ಒಳ್ಳೆಯ ಬರಹ, ದೂರದರ್ಶನ ಮಾಧ್ಯಮ ಏನು ಸಹ ಮಾಡಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.
ಹೀಗೆ ಬರೆಯುತ್ತಿರು...

PARAANJAPE K.N. ಹೇಳಿದರು...

ರಾಜೇಶ್,
ನಿಮ್ಮ ಬ್ಲಾಗಿಗೆ ಮೊದಲ ಬಾರಿ ಇಂದು ಬಂದೆ. ಧಾರಾವಾಹಿಗಳು ಜನಸಾಮಾನ್ಯರ ಮೇಲೆ ಉ೦ಟು ಮಾಡುವ ಪರಿಣಾಮ ವನ್ನು ವಿಡ೦ಬನಾತ್ಮಕವಾಗಿ ಹಾಸ್ಯದ ಲೇಪನದೊ೦ದಿಗೆ ಉಣಬಡಿಸಿದ್ದೀರಿ. ಚೆನ್ನಾಗಿದೆ. ನನ್ನ ಬ್ಲಾಗಿಗೂ ಬರುತ್ತಿರಿ.
www.nirpars.blogspot.com
www.paranjapes.blogspot.com

ಸಾಗರದಾಚೆಯ ಇಂಚರ ಹೇಳಿದರು...

ರಾಜೇಶ್,
ನಿಜಕ್ಕೂ ನಾವೆಲ್ಲರೂ ಧಾರಾವಾಹಿಗಳಿಗೆ ಎಷ್ಟೊಂದು ಅಂಟಿಕೊಂಡಿದ್ದೇವೆ ಎಂದರೆ ಮನೆಗೆ ನೆಂಟರು ಬಂದರೆ ಅವರನ್ನು ಸರಿಯಾಗಿ ವಿಚರಿಸಿಕೊಳ್ಳದಷ್ಟು. ಮೊದಲಿನ ಆತ್ಮೀಯತೆ ನಶಿಸುತ್ತಿದೆ ಈ ಧಾರಾವಾಹಿಗಳಿಂದ ಎನಿಸುತ್ತಿದೆ. ಒಳ್ಳೆಯ ಲೇಖನ

Veena DhanuGowda ಹೇಳಿದರು...

Hello Rajesh,

Olleya topic select madidiri, Novu, viraha, Preethiya naduve shambhavi madam kathe chanda ide..
Nivu indininda Mukta nodi ;)

Annapoorna Daithota ಹೇಳಿದರು...

ಹೂಂ, ನಾನೂ ಕೇಳಿದೀನಿ ಈ ಥರದ ಸಂಬಂಧಗಳ ಬಗ್ಗೆ :)
ಇದು ಕೆಲವೊಮ್ಮೆ ಎರಡು, ಮೂರು ಧಾರಾವಾಹಿ ಮಿಶ್ರವಾಗಿ ಹೊಸ ಕಥೆ ಕೂಡಾ ಆಗಿದ್ದಿದೆ :D

ಅಂದ್ ಹಾಗೆ, ನಿಮ್ಗೆ ‘ಸುಕನ್ಯಾ, ಕಾದಂಬರಿ, ಅಭಿ’ ಗೊತ್ತಿಲ್ವಾ ?
ನಾನೇ ಪುಣ್ಯವಂತೆ, ಇವರ ಬಗ್ಗೆನೂ ಕೇಳಿದೀನಿ :D

ಮನಸು ಹೇಳಿದರು...

ha ha haha chennagide... shambhavi teacher papa allave haha naavu bidade noduva daravahi..olleya topic ayke madideeri haha

gambeeravagi chintane nedesideeri..

vandanegalu

ಶಿವಪ್ರಕಾಶ್ ಹೇಳಿದರು...

ಹ್ಹಾ ಹ್ಹಾ ಹ್ಹಾ...
ಹೌದು ರೀ,
ನನ್ನ ಇಬ್ಬರು ರೂಂಮೇಟ್ ಕೂಡ ಹಾಗೆ ಧಾರಾವಾಹಿಗಳ ಬಗ್ಗೆ ಮಾತಾಡ್ತಿರ್ತರೆ.
ಮನೆಯಲ್ಲಿ ಕೂಡ ಹಾಗೆ...

ಧನ್ಯವಾದಗಳು...

ಧರಿತ್ರಿ ಹೇಳಿದರು...

ರಾಜೇಶ್ ನಮಸ್ತೆ...
ಬರುವಾಗ ತುಂಬಾ ಲೇಟಾಯ್ತು..ಕೆಲಸ ಬ್ಯುಸಿ ನಡುವೆ ಚೂರು 'ಟ್ರಾಫಿಕ್ ಜಾಮ್'...ಬೈಕೋಬೇಡಿ.

ಬರಹ ಚೆನ್ನಾಗಿದೆ.ಇಷ್ಟವಾಯಿತು. ಓದುತ್ತಾ ಹೋದಂತೆ ಗಿರೀಶ್ ಕಾಸರವಳ್ಳಿ ಅವರ 'ಗುಲಾಬಿ ಟಾಕೀಸ್' ನೆನಪಾಯ್ತು..

ಕೆಲವರಿಗೆ ಧಾರವಾಹಿಗಳಿಲ್ಲದೆ ದಿನ ಸರಿಯೋದೇ ಕಷ್ಟ. ಎಷ್ಟರಮಟ್ಟಿಗೆ ಅಂದ್ರೆ ರಿಯಲ್ ಲೈಫ್-ರೀಲ್ ಲೈಫ್ ಎರಡೂ ಕನ್ ಫ್ಯೂಸ್ ಮಾಡಿಕೊಂಡಿರ್ತಾರೆ!!!

ಮತ್ತೆ ಬರುವೆ..ನಮಸ್ಕಾರ...
ಧರಿತ್ರಿ

ಅನಾಮಧೇಯ ಹೇಳಿದರು...

nim mane chanda ide.. nan manegondu link haakidene

ಅನಾಮಧೇಯ ಹೇಳಿದರು...

ರಾಜೇಶ್,
ನೀವು ಹೇಳೊದು ಸರಿನೇ..
ನಮ್ಮ ಮನೇಲ್ಲಿ ನಮ್ಮ ಅಮ್ಮ ನಿದ್ದೆ ಬಿಡುತ್ತಾರೆ, ಅಪ್ಪನಿಗೆ ಊಟ ಬೇಕಾದರೆ ತಡವಾಗ ಕೊಡುತ್ತಾರೆ..ಯಾವುದಾದ್ರು ಎಪಿಸೋಡ್ ತಪ್ಪಿದ್ರೆ ಮದ್ಯ ರಾತ್ರಿ ಬರುತ್ತೆ ಆಗ ಎದ್ದು ಸಹಾ ನೋಡುತ್ತಾರೆ.... ಈ ದಾರವಾಹಿಗಳಂತು ಜನರ ಮೇಲೆ ತುಂಬಾ ಪರಿಣಾಮ ಬೀರುತ್ತದೆ ರಾಜೇಶ್.......
ಅದ್ಯಾರು ಹುಟ್ಟು ಹಾಕಿದರೋ ಈ ಧಾರವಾಹಿ ಅನ್ನೋ ಮಾಯೆ ಯನ್ನು....????!!!!!

shivu.k ಹೇಳಿದರು...

ರಾಜೇಶ್,

ನಾನು ಮೊದಲು ಓದಲು ಪ್ರಾರಂಭಿಸಿದಾಗ ಯಾವುದೇ ಗಹನವಾದ ವಿಚಾರವನ್ನು ರಾಜೇಶ್ ಹೇಳುತ್ತಿರಬಹುದು ಅಂತ ಕುತೂಹಲವಿತ್ತು...

ಅದರೂ ನೀವು ಹೇಳುತ್ತಿರುವುದು ನಿಜ. ವಸ್ತುನಿಷ್ಟವಾಗಿದೆ....ನಮ್ಮ ಜನರಿಗೆಲ್ಲಾ ಈ ಭಾವೊದ್ವೇಗಕ್ಕೆ ಒಳಗಾಗುವುದನ್ನು ಕಂಡೇ ನಮ್ಮ ಧಾರವಾಹಿ ನಿರ್ದೇಶಕರು ಚೆನ್ನಾಗಿ ದುಡ್ಡು ಮಾಡುತ್ತಿರುವುದು...
ಸದ್ಯ ನಾನಂತೂ ಟಿ.ವಿ ನೋಡುವುದು ಕಡಿಮೆ...ಅದರಲ್ಲೂ ಧಾರವಾಹಿಗಳತ್ತಾ ತಿರುಗಿಯೂ ಮಲಗುವುದಿಲ್ಲ...

ರಾಜೇಶ್ ಮೊದಲ ಬಾರಿಗೆ ಲೇಖನಕ್ಕೆ ಹೊಸ ವಿಚಾರವನ್ನು ಆರಿಸಿಕೊಂಡಿರುವಂತಿದೆ...good...ಬದಲಾವಣೆ ಬೇಕು...ಮುಂದುವರಿಯಲಿ...
ಧನ್ಯವಾದಗಳು...

Manas ಹೇಳಿದರು...

Use English so that we can also rwead

Prabhuraj Moogi ಹೇಳಿದರು...

ಧಾರಾವಾಹಿಗಳು ಅಷ್ಟು ಜನಪ್ರಿಯಾ ಆಗ್ತಿವೆ, ನಮ್ಮ ಅಮ್ಮನೂ ಹಾಗೆ ಒಂದೆರಡು ಧಾರಾವಾಹಿಗಳು ನೊಡ್ತಾಳೆ ದಿನಾಲೂ.. ಅದಕ್ಕೆ ನಾನೂ ಮಿಂಚು ಧಾರಾವಾಹಿ ಸ್ವರೂಪಾನಾ ಸೊಸೆ ಮಾಡ್ಕೊ ಅಂತ ಕಾಡ್ತಿರ್ತೀನಿ... :)

ಶರಶ್ಚಂದ್ರ ಕಲ್ಮನೆ ಹೇಳಿದರು...

ರಾಜೇಶ್,
ನಮ್ಮ ಮನೆಯಲ್ಲಿ ಈಗ ಕೇಬಲ್ ಇಲ್ಲದೆ ಇರುವುದರಿಂದ ಇದರ ಬಗ್ಗೆ ಕಾಮೆಂಟ್ ಮಾಡುವುದು ಉಚಿತವಲ್ಲ... ಆದರೆ ನನಗೆ ನೆನಪಿರುವ ಹಾಗೆ ಪ್ರಕಾಶ್ ಬೆಳವಾಡಿ ಅವರ "ಗರ್ವ" , ಗಿರೀಶ್ ಕಾಸರವಳ್ಳಿ ಅವರ "ಗೃಹಭಂಗ" ಹಾಗು ಸೇತುರಾಂ ಅವರ "ಮಂಥನ" ಅಷ್ಟೇ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ದಾರಾವಾಹಿಗಳು. ಬೇರೆ ದಾರಾವಾಹಿಗಳು ತಲೆನೋವು ತಂದುಕೊಳ್ಳಲು ಒಂದು ದಾರಿ.... ಇದರ ಬದಲು ಜನರು ಪುಸ್ತಕಗಳ ಕಡೆ ಒಲವು ತೋರಿದ್ದರೆ ಅವರ ಕಲ್ಪನಾ ಸಾಮರ್ಥ್ಯವೂ ಹೆಚ್ಚಾಗುತ್ತಿತ್ತೋ ಏನೋ :D

ವಿನುತ ಹೇಳಿದರು...

ಗ೦ಭೀರ ಧಾಟಿಯಲ್ಲಿ ಶುರುವಾದ ಬರಹ, ಹಾಸ್ಯ ಮಿಶ್ರಣದೊ೦ದಿಗೆ ಓದಿಸಿಕೊ೦ಡು ಹೋಗುತ್ತದೆ. ಅಬ್ಬಾ! ಅದೇನು ಧಾರಾವಾಹಿಗಳು! ಅವುಗಳೊಳಗೆ ನಾವೋ ನಮ್ಮೊಳಗೆ ಅವೋ ಅನಿಸ್ತದೆ!

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಪ್ರೀತಿಯ....
ಜ್ಯೋತಿ, ದಿವ್ಯ, ಪ್ರಕಾಶಣ್ಣ, ಉಷಾ, ಲಕ್ಷ್ಮಣ್, ವೈಶಾಲಿ ಮೇಡಂ, ಪ್ರಭು, ಪರಾಂಜಪೆ ಸರ್, ಗುರುಮೂರ್ತಿ, ವೀಣಾ, ಅನ್ನಪೂರ್ಣ ಮೇಡಂ, ನಗಿಸು ಮೇಡಂ, ಶಿವ ಪ್ರಕಾಶ್, ಧರಿತ್ರಿ, ಶಮ ಮೇಡಂ, ಇಂಚರ, ಶಿವೂ ಸರ್, ಸಂತೋಷ್, ಪ್ರಭುರಾಜ್, ಶರತ್ ಮತ್ತು ವಿನುತ ಮೇಡಂ

ಕಾರಣಾಂತರಗಳಿಂದ ನಿಮ್ಮೆಲ್ಲರ ಪ್ರೀತಿ ಪೂರ್ವಕ ಪ್ರತಿಕ್ರಿಯೆಗಳಿಗೆ ವೈಯುಕ್ತಿಕವಾಗಿ ಉತ್ತರಿಸಲಾಗುತ್ತಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ, ಶೀಘ್ರವಾಗಿ ಖಂಡಿತ ಎಲ್ಲಾ ಪ್ರತಿಕ್ರಿಯೆಗಳಿಗೂ ಉತ್ತರಿಸುತ್ತೇನೆ. ನೀವೆಲ್ಲ ಹೀಗೆಯೇ ಪ್ರೀತಿಯಿಂದ ದಯವಿಟ್ಟು ಬರುತ್ತಿರಿ ಅಂತ ವಿನಂತಿಸುತ್ತೇನೆ, ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಬರೆಯುವಂತೆ ಮಾಡಿದೆ ಅದಕ್ಕಾಗಿ ನಾನು ನಿಮಗೆಲ್ಲ ಋಣಿ.

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ನಿಜ. ನೀವು ಬರೆದಂತೆ ಇವು Serial Killers! ನಮ್ಮ ಭಾವನೆ, ಯೋಚನೆಗಳನ್ನೆಲ್ಲಾ ಹತೋಟಿಯಲ್ಲಿಡಲು ಪ್ರಯತ್ನಿಸುತ್ತವೆ. ನಾವು ಭಾರಿ ಹುಷಾರಾಗಿರಬೇಕು!

Prashanth ಹೇಳಿದರು...

nice one, chennagide... Now i can say that you know 3 serials name. Good man...